Publish Date: Thu, 13 Nov 2025 (09:48 IST)
Updated Date: Thu, 13 Nov 2025 (09:50 IST)
ಬೆಂಗಳೂರು: ಈ ಹಿಂದೆ ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಹಾಕಿದ್ದಕ್ಕೆ ಜೆಡಿಎಸ್ ಸೇರಿ ಇಡೀ ಜಿಲ್ಲೆಯಲ್ಲೇ ಕಾಂಗ್ರೆಸ್ ನ್ನು ವೈಟ್ ವಾಶ್ ಮಾಡಿದ್ದೆ. ಮುಂದೆಯೂ ಅಂತಹ ಕಾಲ ಬರಬಹುದು ಎಂದು ಸಿಎಂ ಸಿದ್ದರಾಮಯ್ಯ ಆಪ್ತ ಹಿರಿಯ ಶಾಸಕ ಕೆಎನ್ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ವಿರುದ್ಧ ಮಾತನಾಡಿದ ತಪ್ಪಿಗೆ ಅವರನ್ನು ಸಚಿವ ಸ್ಥಾನದಿಂದಲೇ ಕಿತ್ತು ಹಾಕಲಾಗಿದ್ದು, ರಾಜ್ಯ ಕಾಂಗ್ರೆಸ್ ನಲ್ಲಿ ಮೂಲೆಗುಂಪು ಮಾಡಲಾಗಿದೆ. ಇದಾದ ಬಳಿ ಪಕ್ಷದ ನಿರ್ಧಾರಗಳ ಬಗ್ಗೆಯೇ ರಾಜಣ್ಣ ಬಹಿರಂಗ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
ಇದೀಗ ಮಧುಗಿರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರಿಗೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 2004 ರಲ್ಲಿ ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಆಗ ನಾನು ರಾಜಕೀಯ ಮರುಹುಟ್ಟು ಪಡೆದಿದ್ದು ಜೆಡಿಎಸ್ ಸೇರಿ ಇದೇ ದೊಡ್ಡೇರಿಯಲ್ಲಿ. ಆ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ವೈಟ್ ವಾಶ್ ಮಾಡಿದ್ದೆ. ಮುಂದೆಯೂ ಅಂತಹ ಕಾಲ ಬರಬಹುದು. ಬೈಕ್ ನಲ್ಲಿ ರಾಲಿ ಬರುವಾಗ ಕಾರ್ಯಕರ್ತರು ಒಂದೇ ಒಂದು ಕಾಂಗ್ರೆಸ್ ಬಾವುಟ ಹಿಡಿದಿರಲಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.