Publish Date: Thu, 20 Mar 2025 (08:34 IST)
Updated Date: Thu, 20 Mar 2025 (08:38 IST)
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬೇಸಿಗೆ ಮಳೆ ಶುರುವಾಗಿದೆ. ಇಂದೂ ಕೂಡಾ ಕೆಲವು ಜಿಲ್ಲೆಗಳಿಗೆ ಮಳೆ ಖಚಿತವೆನ್ನಲಾಗಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ.
ರಾಜ್ಯದಲ್ಲಿ ಈಗ ಬಿರು ಬಿಸಿಲಿನ ನಡುವೆ ಅಲ್ಲಲ್ಲಿ ಮಳೆಯಾಗುತ್ತಿದೆ. ಇನ್ನು ಕೆಲವೆಡೆ ಮೋಡ ಕವಿದ ವಾತಾವರಣವಿದೆ. ಉಳಿದಂತೆ ಬಿರು ಬಿಸಿಲಿನ ವಾತಾವರಣ ಮುಂದುವರಿದದೆ. ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ನಿನ್ನೆ ಸಂಜೆ ಮಳೆಯಾಗಿತ್ತು.
ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿತ್ತು. ಅದರಲ್ಲೂ ಉಡುಪಿ ಜಿಲ್ಲೆಗೆ ನಿನ್ನೆ ಭಾರೀ ವರ್ಷಧಾರೆಯಾಗಿತ್ತು. ಇಂದೂ ಕೂಡಾ ಈ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆಯಿದೆ. ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಇಂದು ನಿನ್ನೆಗಿಂತ ಬಿರುಸಾದ ಮಳೆಯಾಗುವ ಸಂಭವವಿದೆ.
ಆದರೆ ಉಡುಪಿಯಲ್ಲಿಇಂದು ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುವ ಸಂಭವವಿದೆ. ಉಳಿದಂತೆ ಯಾವುದೇ ಜಿಲ್ಲೆಗಳಿಗೂ ಮಳೆಯ ಸೂಚನೆಯಿಲ್ಲ. ಆದರೆ ಹಾಸನ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಸಣ್ಣ ಮಟ್ಟಿಗೆ ಮೋಡ ಕವಿದ ವಾತಾವರಣ ಕಂಡುಬರಬಹುದು.
ಉಳಿದಂತೆ ರಾಜ್ಯದಲ್ಲಿ ಒಟ್ಟಾರೆ ಗರಿಷ್ಠ ತಾಪಮಾನ 33 ರಿಂದ 34 ಡಿಗ್ರಿಯಷ್ಟಿರಲಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆಯಿದ್ದರೂ ತಾಪಮಾನ ಗರಿಷ್ಠ 34 ಡಿಗ್ರಿಯವರೆಗೆ ಇರಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.