Publish Date: Fri, 21 Mar 2025 (08:46 IST)
Updated Date: Fri, 21 Mar 2025 (08:51 IST)
ಬೆಂಗಳೂರು: ಕರ್ನಾಟಕದಲ್ಲಿ ಸತತ ಬಿಸಿಲಿನಿಂದ ತತ್ತರಿಸಿರುವ ಜನ ಈಗ ಮಳೆ ಯಾವಾಗ ಎಂದು ಕಾಯುವಂತಾಗಿದೆ. ಮಳೆಗಾಗಿ ಕಾಯುತ್ತಿದ್ದ ಜನರಿಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ.
ರಾಜ್ಯದಲ್ಲಿ ಈಗ ತಾಪಮಾನ ಕೆಲವೆಡೆಯಂತೂ 38-40 ಡಿಗ್ರಿಯವರೆಗೂ ತಲುಪಿದ್ದು ಇದೆ. ಮಧ್ಯಾಹ್ನದ ವೇಳೆ ಹೊರಗೆ ಕಾಲಿಡಲೂ ಆಗದಷ್ಟು ಬಿಸಿಲು ಕಂಡುಬರುತ್ತಿದೆ. ಕೆಲವೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಈ ವರ್ಷ ಸಾಕಷ್ಟು ಮಳೆಯಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಈ ನಡುವೆ ಹವಾಮಾನ ಇಲಾಖೆ ರಾಜ್ಯದ ಜನರಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ. ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮುಂದಿನ ಒಂದು ವಾರ ಕಾಲ ಮಳೆಯ ಆಗಮನ ಖುಷಿ ಕೊಡಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ನಾಳೆಯಿಂದ ನಾಲ್ಕೈದು ದಿನಗಳವರೆಗೆ ರಾಜ್ಯದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗಲಿದೆ.
ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳವರೆಗೆ ಮಳೆ ಸುರಿಯುವ ಸೂಚನೆಯಿದೆ. ಆದರೆ ಉಳಿದೆಡೆ ಯಥಾ ಪ್ರಕಾರ ಬಿಸಿಲಿನ ವಾತಾವರಣ ಮುಂದುವರಿಯಲಿದೆ.