Publish Date: Tue, 24 Jun 2025 (08:28 IST)
Updated Date: Tue, 24 Jun 2025 (08:31 IST)
ಬೆಂಗಳೂರು: ಎರಡು ದಿನ ಕೊಂಚ ಮಟ್ಟಿಗೆ ತಗ್ಗಿದ ವರುಣ ಇಂದಿನಿಂದ ಕೆಲವು ಜಿಲ್ಲೆಗಳಲ್ಲಿ ಮತ್ತೆ ಅಬ್ಬರಿಸಲಿದ್ದಾನೆ. ಇಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರವಿರಲಿದೆ. ಎಲ್ಲೆಲ್ಲಿ ಮಳೆಯಿರಲಿದೆ ಎಂಬ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ನೋಡಿ.
ರಾಜ್ಯದಲ್ಲಿ ಕಳೆದ ವಾರ ಅರಂಭದಲ್ಲಿ ಭಾರೀ ಮಳೆಯಿತ್ತು. ವಾರಂತ್ಯದ ವೇಳೆಗೆ ಮಳೆಯ ಅಬ್ಬರ ಕೊಂಚ ಮಟ್ಟಿಗೆ ತಗ್ಗಿತ್ತು. ಇದರಿಂದ ನೆರೆ ಭೀತಿಯಲ್ಲಿದ್ದ ಜನ ಸಮಾಧಾನಪಡುವಂತಾಗಿತ್ತು. ಆದರೆ ಲೇಟೆಸ್ಟ್ ಹವಾಮಾನ ವರದಿ ಪ್ರಕಾರ ಜೂನ್ 26 ರಿಂದ ರಾಜ್ಯಾದ್ಯಂತ ಮತ್ತೆ ಮುಂಗಾರು ಬಿರುಸುಗೊಳ್ಳಲಿದೆ. ಅದಕ್ಕೆ ಮೊದಲೇ ಕೆಲವು ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆಯಾಗಲಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸೂಚನೆಯಿದೆ. ಈ ಜಿಲ್ಲೆಗಳಲ್ಲಿ ಈ ಬಾರಿ ವ್ಯಾಪಕ ಮಳೆಯಾಗುತ್ತಿದೆ. ಬುಧವಾರದ ಬಳಿಕ ಇಲ್ಲಿ ಮಳೆ ಮತ್ತಷ್ಟು ತೀವ್ರವಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಉಳಿದಂತೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಮಂಡ್ಯ, ಕೋಲಾರ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಬಳ್ಳಾರಿ, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ತಿಳಿದುಬಂದಿದೆ.