ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗ ಗೃಹಲಕ್ಷ್ಮಿ ಯೋಜನೆ ಹಣ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳಿಗೆ ಬಂದಿಲ್ಲ. ಇದಕ್ಕೀಗ ಮಹಿಳೆಯರು ರೊಚ್ಚಿಗೆದ್ದಿದ್ದು ಮುಂದಿನ ಬಾರಿ ವೋಟ್ ಹಾಕಲ್ಲ ಎನ್ನುತ್ತಿದ್ದಾರೆ.
ಗೃಹಲಕ್ಷ್ಮಿ ಹಣ ಬಂದಿದೆಯಾ ಎಂದು ಕಳೆದ ಮೂರು ನಾಲ್ಕು ವಾರಗಳಿಂದ ಬ್ಯಾಂಕ್ ಗೆ ಹೋಗಿ ವಿಚಾರಿಸುತ್ತಿದ್ದೇವೆ. ಆದರೆ ಹಣ ಬಂದಿಲ್ಲ. ಮೆಸೇಜ್ ಕೂಡಾ ಬಂದಿಲ್ಲ ಎನ್ನುತ್ತಿದ್ದಾರೆ ಫಲಾನುಭವಿಗಳು.
ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರ ಪ್ರತೀ ತಿಂಗಳು ಮನೆಯ ಯಜಮಾನಿಯ ಖಾತೆಗೆ 2000 ರೂ. ಹಣ ಕ್ರೆಡಿಟ್ ಮಾಡಬೇಕು. ಫೆಬ್ರವರಿ ಆರಂಭದಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿತ್ತು. ಆಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನನಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿದ್ದಿದ್ದರಿಂದ ನಮ್ಮ ಇಲಾಖೆ ಕೆಲಸ ಕೊಂಚ ಹಿಂದೆ ಉಳಿಯಿತು ಎಂದು ನೆಪ ಹೇಳಿದ್ದರು.
ಆದರೆ ಈಗ ಎಲ್ಲಾ ಸರಿಯಿದ್ದರೂ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲ. ಮಾರ್ಚ್ ಬಳಿಕ ಹಣ ಬಂದಿಲ್ಲ ಎನ್ನುತ್ತಿದ್ದಾರೆ ಬಹುತೇಕ ಫಲಾನುಭವಿಗಳು. ಈ ಬಗ್ಗೆ ಈಗ ಮಹಿಳೆಯರು ರೊಚ್ಚಿಗೆದ್ದಿದ್ದು ಹೀಗೆ ಮಾಡಿದ್ರೆ ಮುಂದಿನ ಬಾರಿ ವೋಟ್ ಹಾಕಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.