Publish Date: Tue, 06 Aug 2024 (11:52 IST)
Updated Date: Tue, 06 Aug 2024 (12:00 IST)
ಬೆಂಗಳೂರು: ಮುಡಾ ಹಗರಣದ ವಿರುದ್ಧ ಪಾದಯಾತ್ರೆ ನಡೆಸಿರುವ ಬಿಜೆಪಿ ನಾಯಕರ ಮಾತಿನ ಏಟಿಗೆ ಕಾಂಗ್ರೆಸ್ ನಾಯಕರು ಎದಿರೇಟು ನೀಡುತ್ತಲೇ ಇದ್ದಾರೆ. ನಿನ್ನೆಯಷ್ಟೇ ಯಡಿಯೂರಪ್ಪ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಎಂದಿದ್ದ ಸಿದ್ದರಾಮಯ್ಯಗೆ ಇಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸಿದ್ದರಾಮಯ್ಯ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ತಿರುಗೇಟು ನೀಡಿದ್ದಾರೆ.
ತಾವು ಲಾ (ಕಾನೂನು) ಓದಿದ್ದಾಗಿ ಸಿದ್ದರಾಮಯ್ಯನವರು ಮಾತುಮಾತಿಗೆ ಹೇಳುತ್ತಾರೆ. ಲಾ ಎಲ್ಲರಿಗೂ ಒಂದೇ ಎಂಬ ಕನಿಷ್ಠ ಜ್ಞಾನ ಮುಖ್ಯಮಂತ್ರಿಗಳಿಗೆ ಇರಬೇಕಿತ್ತು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ತಿಳಿಸಿದರು.
ಮದ್ದೂರಿನಲ್ಲಿ ಶಾಸಕ ಡಿ.ಸಿ.ತಮ್ಮಣ್ಣರವರ ಮನೆಯ ಆವರಣದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ಸನ್ಮಾನ್ಯ ಯಡಿಯೂರಪ್ಪನವರ ಮೇಲೆ ಹಂಸರಾಜ್ ಭಾರದ್ವಾಜ್ ಅವರು ತನಿಖೆಗೆ ಅನುಮತಿ ನೀಡಿದಾಗ ಇದೇ ಸಿದ್ದರಾಮಯ್ಯನವರು ಯಾವ ಮಾತು ಹೇಳಿದ್ದರು? ಯಾವ ಪದಗಳನ್ನು ಬಳಸಿದ್ದರು? ಎಂದು ಕೇಳಿದರು.
ಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್ನ ಸಾವಿರಾರು ಕಾರ್ಯಕರ್ತರು ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದಾರೆ. ಪಾದಯಾತ್ರೆಯ ಹಿಂಭಾಗದಲ್ಲಿ ನೂರಾರು ಕಾರುಗಳನ್ನು ನೀವು ನೋಡುತ್ತೀರಿ. ಈ ಬಿಸಿಲಿನಲ್ಲಿ ಖಾಲಿ ಕಾರುಗಳು ಹೋದರೂ ಒಬ್ಬರೂ ತಮ್ಮ ಕಾರನ್ನೇರುತ್ತಿಲ್ಲ. ಪಾದಯಾತ್ರೆಯ ಬಗ್ಗೆ ಕಾರ್ಯಕರ್ತರ ಉತ್ಸಾಹ ಇದರಿಂದ ವ್ಯಕ್ತವಾಗುತ್ತದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನಮ್ಮಲ್ಲಿ ಕಾರ್ಯಕರ್ತರ ಮಟ್ಟದಿಂದ ರಾಷ್ಟçಮಟ್ಟದ ವರೆಗೆ ಒಗ್ಗಟ್ಟಿದೆ ಎಂದು ತಿಳಿಸಿದರು. ಎಲ್ಲ ಕಡೆ ಹಾಸ್ಯಧಾರಿಗಳು, ಪಾತ್ರಧಾರಿಗಳು ಇರುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದರು. ನಮ್ಮ ಒಗ್ಗಟ್ಟು ಪ್ರಾಮಾಣಿಕತೆಗೆ ಇರುವಂಥದ್ದು; ಅವರ ಒಗ್ಗಟ್ಟು ಭ್ರಷ್ಟಾಚಾರವನ್ನು ರಕ್ಷಣೆ ಮಾಡಲು ಇರುವಂಥದ್ದು. ಇದು ವ್ಯತ್ಯಾಸ ಎಂದು ವಿವರಿಸಿದರು.
ಹೆಗ್ಗಣ ಬಿದ್ದಿದೆ; ಅದನ್ನು ನೋಡಿಕೊಳ್ಳಿ..
ಇವತ್ತು ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಎನ್ನುತ್ತಾರೆ. ಸಿದ್ದರಾಮಯ್ಯನವರಿಗೆ ತಟ್ಟೆಯ ಸೈಜ್ ಎಷ್ಟು ಕತ್ತೆಯ ಸೈಜ್ ಎಷ್ಟೆಂದು ಗೊತ್ತಾಗುವುದಿಲ್ಲ. ಯಾರ ತಟ್ಟೆಯಲ್ಲೂ ಕತ್ತೆ ಬೀಳಲು ಸಾಧ್ಯವಿಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ನಾವು ಹೇಳುತ್ತೇವೆ. ಅದನ್ನು ನೀವು ನೋಡಿಕೊಳ್ಳಿ ಎಂದು ಪಿ. ರಾಜೀವ್ ಅವರು ವ್ಯಂಗ್ಯವಾಡಿದರು.
ರಾಜ್ಯದ ಖಜಾನೆಯಿಂದ ರಾಜ್ಯ ಸರಕಾರವು ಹಣ ಲೂಟಿ ಮಾಡಿ ಚುನಾವಣೆಗೆ ಬಳಸಿದ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಕಾಂಗ್ರೆಸ್ ಆಡಳಿತದಲ್ಲಿ ನಡೆದ ಇದು ಇಡೀ ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿ ಎಂದು ವಿಶ್ಲೇಷಿಸಿದರು.
ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಸಚಿವರು ಎಂದು ಚಂದ್ರಶೇಖರ್ ಅವರು ತಮ್ಮ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದರೂ ಕೂಡ ಸಿಐಡಿ ಚಾರ್ಜ್ ಶೀಟ್ನಲ್ಲಿ ಅವರ ಹೆಸರನ್ನು ಕೈಬಿಡುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರವನ್ನು ಯಾವ ರೀತಿ ರಕ್ಷಿಸಲು ಮುಂದಾಗುತ್ತದೆ; ಯಾವ ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.
ಕಿಕ್ ಬ್ಯಾಕ್ ಕೊಡಲು ಬ್ಲಾಕ್ಮೇಲ್
ಸಿದ್ದರಾಮಯ್ಯನವರನ್ನು ಇಳಿಸುತ್ತೇವೆ; ಇಲ್ಲವಾದರೆ ಕಿಕ್ಬ್ಯಾಕ್ ಕೊಡಿ ಎಂಬ ಬ್ಲಾö್ಯಕ್ಮೇಲ್ ತಂತ್ರಕ್ಕೆ ಕಾಂಗ್ರೆಸ್ಸಿನ ಹೈಕಮಾಂಡ್ ಇಳಿದಿರುವುದು ಈ ರಾಜ್ಯದ ದುರದೃಷ್ಟ. ಕರ್ನಾಟಕವು ಕಾಂಗ್ರೆಸ್ಸಿನ ಎಟಿಎಂ ಆಗಲಿದೆ ಎಂಬ ಈ ಹಿಂದಿನಿAದಲೇ ಆಡುತ್ತಿದ್ದ ನಮ್ಮ ಮಾತು ನಿಜವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಜನತಾದಳ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಸಂಸದ ಪುಟ್ಟಸ್ವಾಮಿ ಮುಂತಾದವರು ಇದ್ದರು.