Publish Date: Mon, 28 Oct 2019 (18:07 IST)
Updated Date: Mon, 28 Oct 2019 (18:08 IST)
ಛಾಪಾಕಾಗದ ಹಗರಣದ ಆರೋಪಿ ಕರೀಂ ಲಾಲಾ ತೆಲಗಿಯ ಅಳಿಯ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರ ನಡುವೆ ಮಾರಾಮಾರಿ ನಡೆದಿದೆ.
ತೆಲಗಿ ಅಳಿಯ ಖಾನಾಪೂರ ತಾಲೂಕಾ ಯುಥ್ ಕಾಂಗ್ರೆಸ್ ಅಧ್ಯಕ್ಷ ಇರ್ಫಾನ್ ತಾಳಿಕೋಟಿ ಮತ್ತು ಖಾನಾಪೂರ ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ವಾರಿಮನಿ ನಡುವೆ ಮಾರಾಮಾರಿ ನಡೆದಿದೆ.
ಖಾನಾಪೂರ ಪಟ್ಟಣದಲ್ಲಿ ಬಹುಕೋಟಿ ಛಾಪಾಕಾಗದ ಹಗರಣದ ಆರೋಪಿ ಕರೀಂ ಲಾಲಾ ತೆಲಗಿಯ ಅಳಿಯ ಮತ್ತು ಖಾನಾಪೂರ ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ವಾರಿಮನಿ ಇವರ ನಡುವೆ ನಡು ರಸ್ತೆಯಲ್ಲಿ ಮಾರಾಮಾರಿ ಜರುಗಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದಕ್ಕೆ ಸಂಬಂಧಿಸಿದಂತೆ ಈ ಇಬ್ಬರೂ ಒಬ್ಬರ ಮೇಲೊಬ್ಬರು ಹೊಡೆದಾಡುವುದು ಮತ್ತು ಇರ್ಫಾನ್ ತಾಳಿಕೋಟಿ ಇವರಿಗೆ ಇನ್ನೂ ಕೆಲವರು ಮನಬಂದಂತೆ ಥಳಿಸಿರುವ ವಿಡಿಯೋಗಳು ಈಗ ವೈರಲ್ ಆಗಿವೆ. ಇಬ್ಬರೂ ಕೂಡಾ ಪ್ರಥಮ ಚಿಕಿತ್ಸೆ ಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇರ್ಫಾನ್ ತಾಳಿಕೋಟಿ ಪತ್ನಿ ಖಾನಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಪ್ರತಿಯಾಗಿ ರಫೀಕ್ ವಾರಿಮನಿ ಕೂಡಾ ತಮ್ಮ ಪರವಾಗಿ ದೂರು ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಘಟನೆಗೆ ಮುಖ್ಯಕಾರಣ ತಿಳಿದು ಬಂದಿಲ್ಲ. ಆದರೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಈ ಘಟನೆಯಂತೂ ಸಾರ್ವಜನಿಕರಿಗೆ ಆತಂಕದ ಜೊತೆ ಸ್ಪಲ್ಪ ಮನರಂಜನೆ ಕೂಡಾ ನೀಡಿದೆ.