Publish Date: Sun, 24 Mar 2024 (09:48 IST)
Updated Date: Sun, 24 Mar 2024 (09:50 IST)
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಡುತ್ತಿದ್ದಂತೇ ಹಾಲಿ ಸಂಸದೆ, ಬಿಜೆಪಿ ಟಿಕೆಟ್ ಆಕಾಂಕ್ಷಿ ಸುಮಲತಾ ಅಸಾಮಾಧಾನಕ್ಕೆ ಕಾರಣವಾಗಿದೆ.
ಮಂಡ್ಯ ಟಿಕೆಟ್ ನನಗೇ ಸಿಗುತ್ತದೆ ಎಂದು ಕಾದು ಕುಳಿತಿದ್ದ ಸುಮಲತಾಗೆ ಬಿಜೆಪಿ ನಾಯಕರು ಶಾಕ್ ಕೊಟ್ಟಿದ್ದಾರೆ. ಮಂಡ್ಯದಿಂದ ಜೆಡಿಎಸ್ ನಾಯಕ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದು ಗುಂಪು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೂ ಒತ್ತಾಯಿಸುತ್ತಿದೆ.
ಅಂತೂ ಮಂಡ್ಯ ಜೆಡಿಎಸ್ ತೆಕ್ಕೆಗೆ ಎನ್ನುವುದು ಫಿಕ್ಸ್ ಆಗಿದೆ. ಆದರೆ ಈಗ ಮಂಡ್ಯದಲ್ಲಿ ಜೆಡಿಎಸ್ ನಿಂದ ಯಾರೇ ನಿಂತರೂ ಗೆಲ್ಲಬೇಕಾದರೆ ಸುಮಲತಾ ಅಂಬರೀಶ್ ರನ್ನು ಓಲೈಸುವ ಅನಿವಾರ್ಯತೆಯಿದೆ. ಒಂದು ವೇಳೆ ಸುಮಲತಾರನ್ನು ಕಡೆಗಣಿಸಿದರೆ ಅವರು ಪಕ್ಷೇತರರಾಗಿ ನಿಂತು ಸವಾಲು ಎಸೆಯಬಹುದು.
ಆಗ ಜೆಡಿಎಸ್ ಗೆ ಗೆಲ್ಲಲು ಕಷ್ಟವಾಗಬಹುದು. ಹೀಗಾಗಿ ಕುಮಾರಸ್ವಾಮಿ ಈಗಾಗಲೇ ಸುಮಲತಾ ನನ್ನ ಅಕ್ಕನ ಹಾಗೆ ಎಂದು ತೇಪೆ ಹಾಕಲು ಯತ್ನಿಸಿದ್ದಾರೆ. ಬಿಜೆಪಿ ನಾಯಕರೂ ಸುಮಲತಾರನ್ನು ಸಮಾಧಾನಿಸುವ ಕೆಲಸ ಮಾಡಲೇಬೇಕಾಗಿದೆ. ಯಾಕೆಂದರೆ ಈಗಾಗಲೇ ಬಿಜೆಪಿ ಕೈಕೊಟ್ಟ ಮೇಲೆ ಸುಮಲತಾಗೆ ಆಪ್ತರು ಪಕ್ಷೇತರರಾಗಿ ನಿಲ್ಲಿ ಎಂದು ಸಲಹೆ ನೀಡುತ್ತಿದ್ದಾರೆ. ಒಂದು ವೇಳೆ ಅವರು ಪಕ್ಷೇತರರಾಗಿ ನಿಂತರೆ ಮತ ವಿಭಜನೆಯಾಗಬಹುದು. ಆಗ ಇದರ ಲಾಭವನ್ನು ಕಾಂಗ್ರೆಸ್ ಪಡೆಯಬಹುದು. ಹೀಗಾಗಿ ಈಗ ಸುಮಲತಾರನ್ನು ಓಲೈಸುವುದು ಜೆಡಿಎಸ್ ಗೆ ಅನಿವಾರ್ಯವಾಗಿದೆ.