Publish Date: Sat, 08 Dec 2018 (16:24 IST)
Updated Date: Sat, 08 Dec 2018 (16:26 IST)
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಸಾವಿನ ಸುತ್ತ ಎದ್ದಿರುವ ಅನುಮಾನಗಳಿಗೆ ಅಂತ್ಯವಾಡಲು ರಚಿಸಿರುವ ಸಮಿತಿ ಇದೀಗ, ಶಶಿಕಲಾ ವಿಚಾರಣೆಗೆ ಸಿದ್ಧತೆ ನಡೆಸಿಕೊಂಡಿದೆ.
ಜಯಲಲಿತಾ ಪರಮಾಪ್ತೆಯಾಗಿದ್ದ ಶಶಿಕಲಾ, ಜಯಲಲಿತಾ ಆಸ್ಪತ್ರೆ ಸೇರಿದ 72 ದಿನಗಳ ಕಾಲ ಅವರೊಂದಿಗೆ ಆಸ್ಪತ್ರೆಯಲ್ಲಿದ್ದರು. ಆದ್ದರಿಂದ ಅವರ ವಿಚಾರಣೆ ಹಾಗೂ ಹೇಳಿಕೆ ಭಾರಿ ಮಹತ್ವ ಪಡೆದುಕೊಳ್ಳುವುದರಿಂದ, ಅರ್ಮುಗಂ ಸ್ವಾಮಿ ನೇತೃತ್ವದ ಸಮಿತಿ, ಶಶಿಕಲಾ ಅವರ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕರ್ನಾಟಕ ಕಾರಾಗೃಹ ಇಲಾಖೆಗೆ ಪತ್ರ ಬರೆದಿದೆ.
ಇದರೊಂದಿಗೆ ಶಶಿಕಲಾ ವಿಚಾರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ತಮಿಳುನಾಡು ಗೃಹ ಇಲಾಖೆ ಕಾರ್ಯದರ್ಶಿಗೂ ಪತ್ರ ಬರೆದಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾರನ್ನು ಶೀಘ್ರದಲ್ಲಿಯೇ ಭೇಟಿಯಾಗಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಸಮಿತಿ ಇದೇ ಮೊದಲ ಬಾರಿಗೆ ಶಶಿಕಲಾ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಜಯಲಲಿತಾ ದಾಖಲಾಗಿದ್ದ ಆಪೊಲೋ ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಯಲಲಿತಾ ಆರೈಕೆ ಮಾಡಿದ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಜನರ ವಿಚಾರಣೆಯನ್ನು ಮಾಡಿದೆ.