Publish Date: Sat, 07 May 2022 (16:56 IST)
Updated Date: Sat, 07 May 2022 (16:58 IST)
ನನ್ನನ್ನು ಪಕ್ಷದಿಂದ ಹೊರಗೆ ಹಾಕಿಬಿಡ್ತಾರೆ, ಶಿಸ್ತು ಕ್ರಮ ಕೈಗೊಳ್ತಾರೆ ಅಂತ ಯಾರೂ ಖುಷಿಪಡಬೇಡಿ. ಅದು ಯಾವುದೂ ಆಗಲ್ಲ. ನಾನು ತಗ್ಗೋ ಮಗನೇ ಅಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸತ್ಯ ಮಾತನಾಡಿದ್ದೇನೆ. ಸತ್ಯ ಯಾವಾಗಿತ್ತಿದ್ದರೂ ಚಿನ್ನ ಇದ್ದಂತೆ. ಸುಳ್ಳು ಹೇಳಿಲ್ಲ ನಾನು ಎಂದು ಸಿಎಂ ಸ್ಥಾನಕ್ಕೆ 2500 ಕೋಟಿ ಆಫರ್ ಮಾಡಿದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಟೀವಿ ಚಾನೆಲ್ ಗಳಲ್ಲಿ ಕುಳಿತು. ಯತ್ನಾಳ್ ಉಚ್ಛಾಟನೆ ಮಾಡಲು ಹೈಕಮಾಂಡ್ ಗೆ ತಾಕತ್ತು ಇಲ್ಲವಾ? ಯತ್ನಾಳ್ ಫಿಲ್ಟರ್ ಇಲ್ಲದ ಹೇಳಿಕೆ ನೀಡ್ತಾರೆ ಅಂತೆಲ್ಲಾ ಹೇಳ್ತಾರೆ. ಸತ್ಯ ಹೇಳಬೇಕಾದರೆ ಫಿಲ್ಟರ್ ಇರಲ್ಲ. ಸುಳ್ಳು ಹೇಳಬೇಕಾದರೆ ಫಿಲ್ಟರ್ ಇರುತ್ತೆ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದರು.
ನನ್ನ ಹೇಳಿಕೆ ಹಿಡಿದುಕೊಂಡು ಡಿಕೆ ಶಿವಕುಮಾರ್ ಟ್ವಿಟ್ ಮಾಡುತ್ತಿದ್ದಾರೆ. ಅಂದರೆ ಅವರಿಗೆ ನನ್ನ ಬಗ್ಗೆ ಭಯ ಶುರುವಾಗಿದೆ ಅಂತ ಅರ್ಥ. ಬಿಬಿಎಂಪಿ ಎಂಬ ಚರಂಡಿಯನ್ನು ಅವರು ಬಿದ್ದು ಒದ್ದಾಡುತ್ತಿದ್ದಾರೆ. ಅವರು ನನಗೆ ಹೇಳುವ ಅಗತ್ಯವಿಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದರು.
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಸಚಿವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಶ್ವಥ್ ನಾರಾಯಣ್ ಮೇಲಿನ ಆರೋಪ ಸುಳ್ಳು ಅನ್ನಿಸುತ್ತೆ. ಅವರಿಗೆ ಯಾವುದೇ ತೊಂದರೆ ಆಗಲ್ಲ ಬಿಡಿ ಎಂದು ಯತ್ನಾಳ್ ಹೇಳಿದರು.