Publish Date: Tue, 19 Feb 2019 (16:57 IST)
Updated Date: Tue, 19 Feb 2019 (16:59 IST)
ಪ್ರತಿಯೊಬ್ಬರು ಭೂಮಿಯ ಮೇಲೆ ಎಷ್ಟು ದಿನ ಬದುಕುತ್ತೇವೆ ಎಂದು ಯಾರಿಗೂ ತಿಳಿದಿಲ್ಲ. ಬದುಕಿರುವ ಸಮಯದಲ್ಲಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಬೇಕು. ಈ ಧರ್ಮವನ್ನು ಪಾಲಿಸುತ್ತಿರುವ ನಾನು ಮಾನವ ಧರ್ಮದ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನ ತಿರುಮಕೂಡಲು ತಿ.ನರಸೀಪುರ ಶ್ರೀಕ್ಷೇತ್ರ ಕಾವೇರಿ ,ಕಪಿಲಾ ಹಾಗೂ ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11 ನೇ ಕುಂಭಮೇಳದ ಅಂತಿಮ ದಿನ ನದಿಯ ಮಧ್ಯ ಭಾಗದ ಧಾರ್ಮಿಕ ಸಭಾ ಮಂಟಪದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಭಕ್ತರು ಪವಿತ್ರ ಪುಣ್ಯ ಸ್ನಾನ ಮಾಡಿ ತಮ್ಮ ಮನಸ್ಸನು ಶುದ್ಧ ಮಾಡಿಕೊಳ್ಳಬೇಕು. ಮೂರು ವರ್ಷಕೊಮ್ಮೆ ನಡೆಯುವ ಕುಂಭಮೇಳ ಯಶಸ್ವಿ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದರು.
ದಕ್ಷಿಣ ಭಾರತದಲ್ಲಿರುವವರಿಗೆ ಪ್ರಯಾಗದಲ್ಲಿ ನಡೆಯುವ ಕುಂಭಮೇಳಕ್ಕೆ ಹೋಗಲು ಕಷ್ಟವಾಗಬಹುದು. ಈ ಕುಂಭಮೇಳ ಪ್ರಯಾಗದಲ್ಲಿ ನಡೆಯುವ ಕುಂಭಮೇಳದಂತೆ ನಡೆಯಬೇಕು ಹೆಚ್ಚು ಜನರು ಭಾಗವಹಿಸುವಂತಾಗಬೇಕು ಎಂದರು.
ರಾಜ್ಯದಲ್ಲಿ 70-80 ಪ್ರತಿಶತ ಭಾಗದಲ್ಲಿ ಮಳೆಯಾಧರಿತ ಕೃಷಿ ನಡೆಯುತ್ತದೆ. ಈ ಬಾರಿ ರೈತ ಸಮುದಾಯಕ್ಕೆ ಸರಿಯಾದ ಮಳೆಯಾಗಿ ನೆಮ್ಮದಿಯ ಜೀವನ ನಡೆಸಲು ಪರಮಾತ್ಮ ಮತ್ತು ಕಾವೇರಿ ಮಾತೆ ಕೃಪೆ ನೀಡಬೇಕೆಂದು ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ. ಕುವೆಂಪು ಅವರ ನಾಡಗೀತೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಾಲನ್ನು ಹೇಳಿ ನಮ್ಮ ನಾಡು ಎಲ್ಲರನ್ನು ಒಂದೇ ರೀತಿಯಲ್ಲಿ ಸರ್ವ ಸಮಾನವಾಗಿ ಕಾಣುವ ಶಾಂತಿಯ ತೋಟವಾಗಿದೆ ಎಂದರು.