Publish Date: Sun, 03 May 2020 (20:20 IST)
Updated Date: Sun, 03 May 2020 (20:23 IST)
ಗುಟ್ಕಾ ಪ್ರಿಯರು ಗಮನವಿಟ್ಟು ಈ ಸುದ್ದಿ ಓದಲೇಬೇಕು. ಗುಟ್ಕಾ ಜಗಿಯುತ್ತಾ ಇನ್ಮುಂದೆ ಎಲ್ಲೆಂದರಲ್ಲಿ ಉಗುಳುವಂತಿಲ್ಲ.
ಹಾವೇರಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುವುದನ್ನು ಹಾಗೂ ಉಗುಳುವುದನ್ನು ನಿಷೇಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಆದೇಶ ಹೊರಡಿಸಿದ್ದಾರೆ.
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು, ಪಾನ್ ಮಸಾಲಾ, ಜರ್ದಾ, ಖೈನಿ, ಎಲೆ ಅಡಿಕೆ ಇತ್ಯಾದಿಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯುಮೋನಿಯಾ ಮತ್ತು ಕೋವಿಡ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ-1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ-2005 ಪ್ರಕಾರ ಪ್ರಕರಣ ದಾಖಲಿಸಿ ಉಲ್ಲಂಘಿತರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.