Publish Date: Fri, 27 Dec 2024 (17:25 IST)
Updated Date: Fri, 27 Dec 2024 (17:27 IST)
ಹುಬ್ಬಳ್ಳಿ: ಇಲ್ಲಿನ ಸಾಯಿನಗರ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನ ಬಳಿ ಕಟ್ಟಡದಲ್ಲಿ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಲಿಂಗರಾಜ ಸಿದ್ದಪ್ಪ ಬಿರನೂರ (19) ಮೃತಪಟ್ಟಿದ್ದಾರೆ.
ಲಿಂಗರಾಜ ಇಲ್ಲಿನ ವಿದ್ಯಾನಗರ ಬಿವಿಬಿ ಕಾಲೇಜ್ನಲ್ಲಿ ವಾಚ್ಮನ್ ಆಗಿದ್ದ. ಶುಕ್ರವಾರ ಸಂಜೆ ೪ ಗಂಟೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇದರಿಂದ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಭಾನುವಾರ ತಡರಾತ್ರಿ ಅನಿಲ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿದ ಪರಿಣಾಮ ೯ ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು.
ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ಗುರುವಾರ ನಿಜಲಿಂಗಪ್ಪ ಬೇಪುರಿ ( 58 ವರ್ಷ), ಸಂಜಯ ಸವದತ್ತಿ (18) ಹಾಗೂ ಶುಕ್ರವಾರ ಬೆಳಗ್ಗೆ ರಾಜು ಮುಗೇರಿ (16) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.
ಲಿಂಗರಾಜ ಬಿರನೂರ ಅಸುನೀಗಿದ್ದಾರೆ. ಇವರಿಗೆ ಶೇ. 85ರಷ್ಟು ಸುಟ್ಟು ಗಾಯಗಳಾಗಿದ್ದವು. ಇನ್ನುಳಿದ ಐವರಲ್ಲಿ ಬಾಲಕ ಹೊರತುಪಡಿಸಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.