Publish Date: Mon, 03 Feb 2025 (10:24 IST)
Updated Date: Mon, 03 Feb 2025 (10:27 IST)
ಹುಬ್ಬಳ್ಳಿ: ಇಂಜಿನಿಯರಿಂಗ್ ವಿದ್ಯಾರ್ಥಿನಿ ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ನೇಹಾ ತಂದೆ ನಿರಂಜನ್ ಹೀರೇಮಠ ಹೊಸ ಆರೋಪವೊಂದನ್ನು ಮಾಡಿದ್ದಾರೆ.
ಹುಬ್ಬಳ್ಳಿಯ ನೇಹಾ ಮರ್ಡರ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪ್ರೀತಿ ನಿರಾಕರಿಸಿದ್ದ ಫಯಾಜ್ ಎಂಬ ಯುವಕ ನೇಹಾಳನ್ನು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲೇ ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದ. ತಕ್ಷಣವೇ ಆತನನ್ನು ವಶಕ್ಕೆ ಪಡೆಯಲಾಗಿತ್ತು.
ಆದರೆ ಪ್ರಕರಣ ನಡೆದು 9 ತಿಂಗಳಾದರೂ ಇದುವರೆಗೆ ಪ್ರಕರಣ ಇತ್ಯರ್ಥವಾಗಿಲ್ಲ. ಕಾಂಗ್ರೆಸ್ ನಗರಪಾಲಿಕೆ ಸದಸ್ಯರೇ ಆಗಿರುವ ನೇಹಾ ತಂದೆ ನಿರಂಜನ್ ಹೀರೇಮಠ ರಾಜ್ಯ ಸರ್ಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ನಿರ್ಮಿಸಿ ಶೀಘ್ರದಲ್ಲೇ ಪ್ರಕರಣ ಇತ್ಯರ್ಥ ಮಾಡುವುದಾಗಿ ಭರವಸೆಎ ನೀಡಿತ್ತು.
ಆದರೆ ಕೊಲೆ ನಡೆದು ಇಷ್ಟು ದಿನ ಆದರೂ ಪ್ರಕರಣ ಇತ್ಯರ್ಥವಾಗಿಲ್ಲ. ವಿಪರ್ಯಾಸವೆಂದರೆ ಹಂತಕ ಫಯಾಜ್ ನನ್ನು ಇತ್ತೀಚೆಗಿನವರೆಗೂ ಕಾಲೇಜಿನಿಂದಲೂ ಅಮಾನತು ಮಾಡಿರಲಿಲ್ಲ. ಹಿಂದೂ ಸಂಘಟನೆ ನಾಯಕ ಪ್ರಮೋದ್ ಮುತಾಲಿಕ್ ಕಾಲೇಜಿಗೆ ತೆರಳಿ ಒತ್ತಡ ಹೇರಿದ ಬಳಿಕವಷ್ಟೇ ಫಯಾಜ್ ನನ್ನು ಅಮಾನತು ಮಾಡಲಾಗಿತ್ತು.
ಇದೀಗ ನೇಹಾ ತಂದೆ ಹೊಸ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಸ್ಥಳೀಯ ಶಾಸಕರೊಬ್ಬರ ಕೈವಾಡವಿದೆ ಎಂದಿದ್ದಾರೆ. ಈ ಪ್ರಕರಣದ ತನಿಖೆ ಎತ್ತ ಸಾಗುತ್ತಿದೆ ಎಂದೇ ನಮಗೆ ಗೊತ್ತಾಗುತ್ತಿಲ್ಲ. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಸಿಬಿಐಗೆ ಪ್ರಕರಣ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ನಮಗೂ ಮಗಳ ಸಾವಿಗೆ ನ್ಯಾಯ ಸಿಗುವ ಭರವಸೆ ಕಾಣುತ್ತಿಲ್ಲ. ಹಾಗಾಗಿ ನಾವೂ ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ. ಪ್ರಕರಣದಲ್ಲಿ ಶಾಸಕರೊಬ್ಬರ ಕೈವಾಡವಿರುವುದಂತೂ ಸತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.