ಹುಬ್ಬಳ್ಳಿ: ಬಿಹಾರ ಮೂಲದ ಪಾಪಿ ರಿತೇಶ್ ಕುಮಾರ್ ನಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಹುಬ್ಬಳ್ಳಿಯ 5 ವರ್ಷದ ಎಳೆ ಕಂದಮ್ಮನ ಅಂತ್ಯ ಸಂಸ್ಕಾರ ಇಂದು ನೆರವೇರಿದೆ. ಇನ್ನೊಂದೆಡೆ ಪೊಲೀಸರಿಂದ ಎನ್ ಕೌಂಟರ್ ಗೀಡಾಗಿ ಸಾವನ್ನಪ್ಪಿದ ಆರೋಪಿ ರಿತೇಶ್ ಮೃತದೇಹ ಅನಾಥವಾಗಿ ಆಸ್ಪತ್ರೆಯಲ್ಲೇ ಬಿದ್ದಿದೆ.
ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇಂದು ಹುಬ್ಬಳ್ಳಿಯ ದೇವಾಂಗ ಪೇಟ ರುದ್ರಭೂಮಿಯಲ್ಲಿ ಕುರುಬ ಸಂಪ್ರದಾಯದಂತೆ ಬಾಲಕಿಯ ಅಂತಿಮ ಸಂಸ್ಕಾರ ನೆರವೇರಿದೆ.
ಈ ವೇಳೆ ಸಾಕಷ್ಟು ಜನ ಸೇರಿದ್ದರು. ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರಿತ್ತು. ಪಾಪಿಯಿಂದ ನರಕಯಾತನೆ ಅನುಭವಿಸಿ ಪ್ರಾಣ ಬಿಟ್ಟ ಎಳೆಕಂದಮ್ಮನಿಗೆ ಎಲ್ಲರೂ ಭಾವುಕ ವಿದಾಯ ಹೇಳಿದ್ದಾರೆ.
ಇನ್ನೊಂದೆಡೆ ಪೊಲೀಸರಿಂದ ಎನ್ ಕೌಂಟರ್ ಗೀಡಾದ ಆರೋಪಿ ರಿತೇಶ್ ಕುಮಾರ್ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿಡಲಾಗಿದೆ. ಆತನ ಕುಟುಂಬಸ್ಥರು ಎಂದು ಹೇಳಿಕೊಂಡು ಇದುವರೆಗೆ ಯಾರೂ ಮೃತದೇಹ ಪಡೆಯಲು ಬಂದಿಲ್ಲ. ಹೀಗಾಗಿ ಅನಾಥ ಶವವಾಗಿ ಶವಾಗಾರದಲ್ಲಿ ಬಿದ್ದಿದ್ದಾನೆ.