Publish Date: Thu, 21 Apr 2022 (17:38 IST)
Updated Date: Thu, 21 Apr 2022 (17:40 IST)
ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಮೌಲ್ವಿ ವಾಸಿಂ ಪಠಾಣ್ನನ್ನ ಹಳೆ ಹುಬ್ಬಳ್ಳಿಯ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ಹಳೆ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಾಟೆಯಲ್ಲಿ ಮಾಸ್ಟರ್ ಮೈಂಡ್ ಎಂದು ಬಿಂಬಿತವಾಗಿದ್ದ ವಾಸೀಂ ಪಠಾಣ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.
ಗುರುವಾರ ಬೆಳಿಗ್ಗೆಯಷ್ಟೇ ವಿಡಿಯೋ ಬಿಡುಗಡೆ ಮಾಡಿದ್ದ ವಾಸೀಂ ಪಠಾಣ್, ನಾನು ಈ ಘಟನೆಗೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಅಲ್ಲ. ನನ್ನ ವಿರುದ್ಧ ಪಿತೂರಿ ನಡೆದಿದೆ. ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು. ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಜನರ ಜೊತೆಗೆ ಮಾತನಾಡಲು ನನ್ನನ್ನು ಕರೆಸಿದ್ದರು. ಪೊಲೀಸರ ಜೊತೆಗೆ ಮಾತನಾಡಿದೆ. ಪೊಲೀಸರ ಸಹಕಾರ ಕೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರೇ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ಹೇಳಿದರು. ನಾನು ವಾಹನದ ಮೇಲೆ ಹತ್ತಿದಾಗ ಅಲ್ಲಿ ಮೈಕ್ ಇರಲಿಲ್ಲ. ಹೀಗಾಗಿ ಕೈ ಸನ್ನೆ ಮಾಡುವ ಮೂಲಕ ಶಾಂತಿ ಕಾಪಾಡಲು ಹೇಳಿದೆ. ಆದರೆ ನಾನೇ ಅದರ ಪಿತೂರಿದಾರ ಎಂದು ಬಿಂಬಿತಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ನಾನು ಘಟನೆ ಮಾಸ್ಟರ್ ಮೈಂಡ್ ಅಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಹುಬ್ಬಳ್ಳಿಯ ವಾತಾವರಣ ಹದಗೆಡಿಸುವ ಉದ್ದೇಶ ನನ್ನದಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪೊಲೀಸ್ ಇಲಾಖೆಯ ಬಗ್ಗೆ ನನಗೆ ಭರವಸೆ ಇದೆ. ಪೊಲೀಸರ ಮುಂದೆ ಹಾಜರಾಗಿ ನನ್ನ ಹೇಳಿಕೆ ಕೊಡುತ್ತೇನೆ. ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ. ಜನರನ್ನು ನಿಯಂತ್ರಿಸುವ ಕಾರ್ಯ ಮಾಡಿದೆ. ನಿಮ್ಮ ಮನೆಗಳಿಗೆ ವಾಪಸ್ ಹೋಗಲು ಹೇಳುತ್ತಿದ್ದೆ. ನನ್ನನ್ನು ಸಿಕ್ಕಿಸಿ ಹಾಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಾನು ಪೊಲೀಸರ ಮುಂದೆ ಹಾಜರಾಗಬೇಕು ಅಂತ ಇದ್ದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ ಸುದ್ದಿಯಿಂದ ನಮ್ಮ ಮನೆಯವರು ಶರಣಾಗದಂತೆ ಒತ್ತಾಯ ಮಾಡಿದರು. ಆದರೆ ಈಗ ನನ್ನ ಮೇಲೆ ಆರೋಪಗಳ ಸುರಿಮಳೆಯಾಗಿತ್ತಿದೆ. ನಾನು ತಪ್ಪು ಮಾಡಿದರೇ ಶಿಕ್ಷೆ ಕೊಡಲಿ. ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಾಸಿಂ ಪಠಾಣ್ ಹೇಳಿಕೆ ನೀಡಿದ್ದಾರೆ.