Publish Date: Thu, 21 Apr 2022 (15:34 IST)
Updated Date: Thu, 21 Apr 2022 (15:38 IST)
ಉತ್ತರ ಪ್ರದೇಶ ರಾಜಕೀಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿರುವ ವಿಚಾರವೆಂದರೆ ಅದು ಅಲ್ಪಸಂಖ್ಯಾತರ ಕಡೆಗಣನೆ. ಇತ್ತೀಚಿಗೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಅಜಂ ಖಾನ್ ಬೆಂಬಲಿಗರು ಈ ಬಗ್ಗೆ ಅಖಿಲೇಶ್ ಯಾದವ್ ವಿರುದ್ದ ಬಹಿರಂಗವಾಗಿ ತೊಡೆ ತಟ್ಟಿದ್ದರು ಮತ್ತು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.
ಅದಕ್ಕೆ ಮುನ್ನುಡಿಯಾಗಿ ಸಮಾಜವಾದಿ ಪಕ್ಷದ ನಾಯಕ ಸಿಕಂದರ್ ಅಲಿ ಸಮಾಜವಾದಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಸಿಕಂದರ್ ಅಲಿ ಮುಲಾಯಂ ಸಿಂಗ್ ಕಟ್ಟಿದ ಪಕ್ಷದಲ್ಲಿ ಬೇರೆಯದೆ ನಡೆಯುತ್ತಿದೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪಕ್ಷ 111 ಸ್ಥಾನಗಳನ್ನು ಗೆಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಪಕ್ಷದ ಏಳಿಗೆಗೆ ಶ್ರಮಿಸಿದ ಮುಸ್ಲಿಂ ನಾಯಕರಾದ ಅಜಂ ಖಾನ್ ಹಾಗೂ ನಹಿದ್ ಹಸನ್ ಕ್ರಮ ಬಂಧನ ವಿಚಾರದಲ್ಲಿ ಪಕ್ಷ ಮೌನ ವಹಿಸಿರುವುದು ಅಲ್ಪಸಂಖ್ಯಾತರ ಕಡೆಗಣನೆಗೆ ಮುನ್ನುಡಿ ಬರೆದಂತ್ತಿದೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು, ತಮ್ಮ ಪಕ್ಷದ ಶಾಸಕರ ಪರ ನಿಲ್ಲಲಾಗದ ವ್ಯಕ್ತಿ ರಾಜ್ಯದ ಸಮಸ್ಯೆಗಳ ಪರ ಹೇಗೆ ನಿಲ್ಲುತ್ತಾನೆ ಎಂದು ಪ್ರಶ್ನಿಸಿದ್ದಾರೆ. ಅಖಿಲೇಶ್ ರಾಜ್ಯದಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ದಬ್ಬಾಳಿಕೆ ಬಗ್ಗೆ ತಮ್ಮ ಧ್ವಮಿಯನ್ನು ಎತ್ತುವುದಿಲ್ಲ ಆದರೆ, ಮುಸ್ಲಿಮರ ಮತಗಳು ಮಾತ್ರ ಅವರಿಗೆ ಬೇಕು ಮುಸ್ಲಿಮರನ್ನು ಅವರು ಮತಬ್ಯಾಂಕ್ಕಾಗಿ ಪರಿಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಖಿಲೇಶ್ ಮುಸ್ಲಿಮರು ಹಾಗೂ ಬಿಜೆಪಿ ನಡುವಿನ ದ್ವೇಷವನ್ನು ಹೆಚ್ಚು ಪ್ರಚೋದಿಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಬಿಎಸ್ಪಿಗೆ ಆದ ಗತಿ ಎಸ್ಪಿಗೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ ಈ ಹಿಂದೆ ಅಜಂ ಖಾನ್ ಕಟ್ಟಾ ಬೆಂಬಲಿಗೆ ಫಸಾಹತ್ ಅಲಿ ಖಾನ್ ಅಖಿಲೇಶ್ ಯಾದವ್ ಕಡೆಗಣಿಸುತ್ತಿರುವುದನ್ನು ಬಹಿರಂಗವಾಗಿ ಕಿಡಿಕಾರಿದ್ದರು.