Publish Date: Tue, 22 Jul 2025 (18:16 IST)
Updated Date: Tue, 22 Jul 2025 (18:18 IST)
ಬೆಂಗಳೂರು: ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ನೂರಾರು ಕೊಲೆಗಳ ತನಿಖೆ ನಡೆಸಲು ಸರ್ಕಾರ ನೇಮಿಸಿರುವ ಎಸ್ಐಟಿ ತಂಡದ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಸರ್ಕಾರ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ನಿಯೋಜಿಸಿತ್ತು. ಈ ತನಿಖಾ ತಂಡದ ನಿಯೋಜನೆಯಾದ ಬೆನ್ನಲ್ಲೇ ಇದರಿಂದ ಇಬ್ಬರು ಐಪಿಎಸ್ ಅಧಿಕಾರಿಗಳು ಹೊರಬಂದಿರುವುದಾಗಿ ಸುದ್ದಿಯಾಗಿತ್ತು.
ಇದರ ಬಗ್ಗೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇಂದು ಗೃಹಸಚಿವ ಡಾ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ತನಿಖಾ ತಂಡದಿಂದ ಯಾರೂ ಹೊರಬಂದಿಲ್ಲ. ಈಗಾಗಲೇ ಘೋಷಣೆಯಾಗಿರುವ ಅಧಿಕಾರಿಗಳು ತನಿಖಾ ತಂಡದ ಭಾಗವಾಗಿರಲಿದ್ದಾರೆ ಎಂದಿದ್ದಾರೆ.
ತನಿಖಾ ತಂಡ ಇಂದು-ನಾಳೆಯಾಗಿ ಧರ್ಮಸ್ಥಳಕ್ಕೆ ಹೋಗಲಿದೆ. ಧರ್ಮಸ್ಥಳ ಪೊಲೀಸರಿಗೂ ಪ್ರಕರಣದ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಈವರೆಗೆ ಯಾರೂ ತನಿಖಾ ತಂಡದಿಂದ ಹೊರಗುಳಿಯುವ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.