ಬೆಂಗಳೂರು: ರಾಜ್ಯದಲ್ಲಿ ಕುಸ್ತಿ ಕದನ ಒಂದು ಹಂತಕ್ಕೆ ಬಂದು ನಿಂತಿದೆ. ಇದೀಗ ಕದನ ವಿರಾಮ ಎನ್ನಬಹುದು. ಹಾಗಿದ್ದರೂ ಸಿದ್ದರಾಮಯ್ಯನವರ ಗುಟ್ಟು ಹೈಕಮಾಂಡ್ ಗೂ ಗೊತ್ತಿದೆ. ಹೀಗಾಗಿಯೇ ಹೈಕಮಾಂಡ್ ಕೂಡಾ ತರಾತುರಿಯ ನಿರ್ಧಾರ ಕೈಗೊಂಡಿಲ್ಲ.
ಸಿದ್ದರಾಮಯ್ಯ ಅಹಿಂದ ಪ್ರಬಲ ನಾಯಕ. ಜೆಡಿಎಸ್ ನಿಂದ ವಲಸೆ ಬಂದವರು, ಮೂಲ ಕಾಂಗ್ರೆಸ್ಸಿಗರಲ್ಲ ಎಂದು ಅನೇಕರು ಅವರ ಬಗ್ಗೆ ವಾದಿಸಬಹುದು. ಆದರೆ ಕಾಂಗ್ರೆಸ್ ನಲ್ಲಿ ಅವರೀಗ ಒಂದು ದೊಡ್ಡ ಶಕ್ತಿ. ಅವರನ್ನು ಎದುರು ಹಾಕಿಕೊಂಡರೆ ಕಾಂಗ್ರೆಸ್ ಗೆ ಅಪಾಯ ತಪ್ಪಿದ್ದಲ್ಲ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರನ್ನು ಬೆಂಬಲಿಸುವ ದೊಡ್ಡಬಣವೇ ಇದೆ. ಅವರೊಬ್ಬ ರಾಜಕೀಯ ಚಾಣಕ್ಯ. ಯಾವ ಸಂದರ್ಭದಲ್ಲಿ ಹೇಗೆ ತಿರುಗೇಟು ನೀಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅವರನ್ನು ರಾಜಕೀಯವಾಗಿ ಬಲ್ಲವರು ಯಾರೂ ಅವರನ್ನು ಅಷ್ಟು ಬೇಗ ಎದುರು ಹಾಕಿಕೊಳ್ಳಲು ಹೋಗಲ್ಲ. ಒಂದು ವೇಳೆ ಅವರನ್ನು ಎದುರು ಹಾಕಿಕೊಂಡು ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟಿದರೆ ಸಿದ್ದರಾಮಯ್ಯ ತಿರುಗಿಬೀಳುವ ಸಾಧ್ಯತೆಯಿದೆ. ಹೀಗಾದಲ್ಲಿ ಅವರ ಬೆಂಬಲಿಗರೂ ಅವರ ಬೆನ್ನಿಗೆ ನಿಲ್ಲುತ್ತಾರೆ. ಆಗ ಸರ್ಕಾರಕ್ಕೇ ಅಪಾಯ. ಈ ಗುಟ್ಟು ಗೊತ್ತಿರುವ ಕಾರಣಕ್ಕೇ ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ವಿಚಾರದಲ್ಲಿ ಎಚ್ಚರಿಕೆ ನಡೆ ಇಡುತ್ತದೆ.