Publish Date: Wed, 28 Dec 2022 (20:15 IST)
Updated Date: Wed, 28 Dec 2022 (20:17 IST)
ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುವವರೇ ಈಕೆಯ ಟಾರ್ಗೆಟ್.! ತನಗೆ ಸರ್ಕಾರಿ ಅಧಿಕಾರಿಗಳು ಪ್ರಭಾವಿಗಳ ಪರಿಚಯವಿದೆ, ತಾನೂ ಪ್ರತಿಷ್ಠಿತ ಹುದ್ದೆಯಲ್ಲಿದ್ದೇನೆ ಎಂದು ನಂಬಿಸಿ, ಸರ್ಕಾರಿ ಹುದ್ದೆ ಕೊಡಿಸುವುದಾಗಿ ಲಕ್ಷ ಲಕ್ಷ ಹಣ ಪಡೆದು ಕೊನೆಗೆ ವಂಚಿಸುತ್ತಿದ್ದ ಮಹಿಳೆಯನ್ನ ಸಿದ್ಧಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಉಮಾದೇವಿ ಬಂಧಿತ ಆರೋಪಿಯಾಗಿದ್ದು,
ಸತೀಶ್ ಎಂಬುವವರಿಗೆ ಪರಿಚಯವಾಗಿದ್ದ ಆರೋಪಿ 'ತಾನು ನಗರದ ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ನನಗೆ ಅನೇಕ ಪ್ರಭಾವಿಗಳ ಪರಿಚಯವಿದೆ. ನಿಮ್ಮ ಮಗನಿಗೆ ಕಾಲೇಜಿನಲ್ಲಿ ಸರ್ಕಾರಿ ಹುದ್ದೆ ಕೊಡಿಸುತ್ತೇನೆ' ಎಂದು ನಂಬಿಸಿದ್ದಳು. ಪ್ರತಿಯಾಗಿ ಸತೀಶ್ ರಿಂದ 6.55 ಲಕ್ಷ ರೂ ಹಣವನ್ನ ಪಡೆದಿದ್ದಳು. ಆದರೆ ಹಣ ಕೈ ಸೇರಿದ ಬಳಿಕ ಯಾವುದೇ ಕೆಲಸ ಕೊಡಿಸದೇ ವಂಚಿಸಿದ್ದಾಳೆ ಎಂದು ಸತೀಶ್ ಸಿದ್ಧಾಪುರ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಸಿದ್ಧಾಪುರ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತಳ ವಿರುದ್ಧ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು, ಜಯನಗರ, ಸಿದ್ಧಾಪುರ, ಗಿರಿನಗರ, ಮಂಡ್ಯ ಜಿಲ್ಲೆಯ ಕೆರಗೋಡು ಠಾಣೆಗಳಲ್ಲಿ ಇದೇ ಮಾದರಿಯಲ್ಲಿ ಹಣ ಪಡೆದು ವಂಚಿಸಿರುವ ಪ್ರಕರಣಗಳಿರುವುದು ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ.