ಮಂಡ್ಯ: ಸ್ವತಂತ್ರ ಸರ್ಕಾರ ಇಲ್ಲದ ಸಂದರ್ಭದಲ್ಲಿಯೂ ರೈತರ ಉಳಿವಿಗಾಗಿ ಶ್ರಮವಹಿಸಿದ್ದೆ. ಇದಿಘ 136 ಸೀಟಿನ ಸ್ವತಂತ್ರ ಸರ್ಕಾರವಿರುವಾಗ ಇವರಿಗೇನಾಗಿದೆ. ರೈತರನ್ನು 7 ದಿನದಿಂದ ರಸ್ತೆಯಲ್ಲಿ ಮಲಗಿಸಬೇಕಿತ್ತಾ, ರೈತರ ಬಗ್ಗೆ ಕಾಳಜಿಯಿರುವವರು ಈ ರೀತಿ ನಡೆಸಿಕೊಳ್ಳುತ್ತಿರಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆಯ ದಿನ ಶಾಸಕ ಮೇಟಿ ಅವರ ಅಂತಿಮ ದರ್ಶನಕ್ಕೆ ಹೋಗಿದ್ದ ಮುಖ್ಯಮಂತ್ರಿಯವರು ಅಲ್ಲೇ ಪಕ್ಕದಲ್ಲೇ ನಡೆಯುತ್ತಿದ್ದ ಪ್ರತಿಭಟನೆ ಜಾಗಕ್ಕೆ ಹೋಗಬಹುದಿತ್ತಲ್ವಾ? ಅಹಿಂದಾ ಹೆಸರಲ್ಲಿ ದೊಡ್ಡ ರ್ಯಾಲಿ ಮಾಡುವೆ ಎನ್ನುತ್ತಾರೆ. ಅದೆಲ್ಲಾ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಹಾಕಿದರು.
ಬೆಲೆ ನಿಗದಿ ಮಾಡಿ ಎಂದು ರೈತರು ಕೇಳಿದ್ರೆ, ಕೇಂದ್ರ ಸರ್ಕಾರ ಹಣ ಕೊಡಬೇಕು ಎನ್ನುತ್ತಾರೆ. ಸಾಲ ಮನ್ನಾ ಮಾಡುವಾಗ ನಾನೇನು ಕೇಂದ್ರ ಸರ್ಕಾರದ ಬಳಿಗೆ ಹೋಗಿದ್ನಾ? ಸರ್ಕಾರದ ನಿರ್ಧಾರ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ. ರೈತರ ಬದುಕಿನ ಜತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.