Publish Date: Thu, 16 Oct 2025 (16:42 IST)
Updated Date: Thu, 16 Oct 2025 (16:44 IST)
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಅಂತ ಮಹಿಳೆಯರಿಗೆ ತಿಂಗಳಿಗೆ 2,000 ರೂ. ಕೊಡ್ತಿದ್ದಾರೆ. ಅದಕ್ಕೆ ಯಾವ ಮಾನದಂಡನೂ ಇಲ್ಲ. ಕನಿಷ್ಠ ವೃದ್ಧಾಪ್ಯ ಪಿಂಚಣಿ, ಅಂಗವಿಕಲರ ಪಿಂಚಣಿಗಾದರೂ ಏನೋ ಮಾನದಂಡ ಅಂತ ಇದೆ. ಆದರೆ ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಮಾನದಂಡ ಇಲ್ಲ. ನನ್ನ ಹೆಂಡ್ತಿಗೂ ಫ್ರೀ, ನಿನ್ನ ಹೆಂಡ್ತಿಗೂ ಫ್ರೀ ಎನ್ನುತ್ತಾರೆ.
ಇದೆಲ್ಲಾ ಹಣ ಕೊಡೋದು ನಿಮ್ಮ ಸ್ವಂತ ದುಡ್ಡಲ್ಲ. ಜನರು ಬೆವರು ಸುರಿಸಿ ತೆರಿಗೆ ರೂಪದಲ್ಲಿ ಖಜಾನೆ ತುಂಬಿದ ದುಡ್ಡು. ಅದನ್ನು ನಿಮಗೆ ಇಷ್ಟ ಬಂದ ಹಾಗೆ ಕೊಡ್ತಿದ್ದೀರಲ್ಲಾ?
ಗೃಹಲಕ್ಷ್ಮಿ ಯೋಜನೆಗೆ ಸಾವಿರಾರು ಕೋಟಿ ಖರ್ಚು ಮಾಡೋದು 100 ಕೋಟಿ ಕೊಟ್ರೆ ಚುಂಚನಕಟ್ಟೆದು ಸಕ್ಕರೆ ಕಾರ್ಖಾನೆ ಓಪನ್ ಆಗೋದು. ಇದರಿಂದ ಕಬ್ಬು ಬೆಳೆಯುವವನು, ಸಾಗಿಸುವವನು ಎಲ್ಲರಿಗೂ ಉದ್ಯೋಗವಾಗುತ್ತಿತ್ತು. ನನಗೆ ಗೊತ್ತಿಲ್ಲಪ್ಪ ಮಂತ್ರಿಗಳೆಲ್ಲಾ ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೋ?
ಸಿದ್ದರಾಮಯ್ಯನವರು ಮೊದಲು ನಾನು ನಾನು ಎನ್ನುವುದನ್ನು ಬಿಡಬೇಕು. ಯಾವ ಇಲಾಖೆ ಬೇಕಾದರೂ ಹಾಳಾಗಲಿ. ಶಿಕ್ಷಣ ಇಲ್ಲದೇ ಹೋದರೆ ಸಮಾಜವೇ ಬಿದ್ದೋಗುತ್ತಲ್ರೀ.. ಹಾಗಾಗಿ ಹಲವು ರೀತಿಯಲ್ಲಿ ಸರ್ಕಾರ ಬದಲಾವಣೆಗಳನ್ನು ತರಬೇಕು. ಸುಳ್ಳು ಹೇಳುವುದನ್ನು ಬಿಡಬೇಕು. ನಾನು ಹೇಳುವುದನ್ನು ಬಿಡದೇ ಹೋದರೆ ಜನರೇ ಕೊನೆ ಮಾಡ್ತಾರೆ ನಿಮ್ಮನ್ನು ಎಂದು ಎಚ್ ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.