Publish Date: Fri, 05 Jul 2024 (14:50 IST)
Updated Date: Fri, 05 Jul 2024 (14:55 IST)
ಬೆಂಗಳೂರು: ರಾಜ್ಯ ಸರ್ಕಾರೀ ನೌಕರರ ವೇತನ ಹೆಚ್ಚಳಕ್ಕೂ ಈಗ ಗ್ಯಾರಂಟಿ ಯೋಜನೆ ಕುತ್ತು ತಂದಿದೆ. ಈ ಬಗ್ಗೆ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನೌಕರರ ವೇತನ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.
ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವುದೇ ತಲೆನೋವಾಗಿದೆ. ಗ್ಯಾರಂಟಿ ಯೋಜನೆಗೆ 50-60 ಸಾವಿರ ಕೋಟಿ ಹಣ ಬೇಕಾಗುತ್ತದೆ. ಹೀಗಾಗಿ ಹಲವು ಯೋಜನೆಗಳಿಗೆ ಕತ್ತರಿ ಹಾಕಲಾಗುತ್ತಿದೆ. ಇದರ ನಡುವೆ ರಾಜ್ಯ ಸರ್ಕಾರೀ ನೌಕರರ ವೇತನ ಹೆಚ್ಚಳದ ಬಗ್ಗೆನಿರೀಕ್ಷೆಗಳಿತ್ತು.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ನೌಕರರ ವೇತನದ ಬಗ್ಗೆ ಚರ್ಚೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸದ್ಯಕ್ಕೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಬೇಕಾಗಿರುವುದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಈ ಬಾರಿ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆ ಶಿಫಾರಸ್ಸು ಮಾಡಿದೆ.
ತೆರಿಗೆ ರೂಪದಲ್ಲಿ ಹೆಚ್ಚು ಹಣ ಸಂಗ್ರಹವಾಗುತ್ತಿಲ್ಲ. ಇತರೆ ಮೂಲಗಳಿಂದ ಹರಿದುಬರುತ್ತಿರುವ ಹಣ ಗ್ಯಾರಂಟಿ ಯೋಜನೆಗಳಿಗೇ ಸಾಕಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ವೇತನ ಹೆಚ್ಚಳ ಇಲ್ಲ. ಆದರೆ ಭವಿಷ್ಯದಲ್ಲಿ ವೇತನ ಪರಿಷ್ಕರಣೆ ಮಾಡುವುದಾಗಿ ತೀರ್ಮಾನಕ್ಕೆ ಬರಲಾಗಿದೆ.