Publish Date: Wed, 12 Dec 2018 (18:38 IST)
Updated Date: Wed, 12 Dec 2018 (18:40 IST)
ಗೋವಾ ರಾಜ್ಯದ ಮಾರುಕಟ್ಟೆಯಲ್ಲಿ ಕರ್ನಾಟಕದ ಮೀನು ಮಾರಾಟಕ್ಕೆ ಪರವಾನಿಗೆ ನೀಡದಿದ್ದಲ್ಲಿ ಗೋವಾಕ್ಕೆ ಹಾಲು, ತರಕಾರಿ ಸರಬರಾಜು ಬಂದ್ ಮಾಡುವುದಾಗಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.
ಹೊರ ರಾಜ್ಯಗಳ ಮೀನುಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ಗೋವಾ ಸರ್ಕಾರದ ಧೋರಣೆಯನ್ನು ಖಂಡಿಸಿ ಹೆದ್ದಾರಿ ತಡೆದು ಇಲ್ಲಿನ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಪರಿಣಾಮವಾಗಿ ಇನ್ಸುಲೇಟರ್ ಲಾರಿಯಲ್ಲಿ (ಶೀತಲಿಕರಣ ಹೊಂದಿರುವ ಲಾರಿ) ಎಫ್ ಡಿ ಎ ಪರವಾನಿಗೆ ಪತ್ರದೊಂದಿಗೆ ತಂದಿರುವ ಮೀನುಗಳನ್ನು ಮಾತ್ರ ಗೋವಾಕ್ಕೆ ಸಾಗಿಸಲು ಅವಕಾಶ ಕೆಲದಿನಗಳ ಕಾಲ ನೀಡಲಾಯಿತು. ಆದರೆ ಗೋವಾಕ್ಕೆ ಮೀನು ಲಾರಿಗಳು ಪ್ರವೇಶಿಸಿದ ನಂತರ ಲಾರಿಯಲ್ಲಿನ ಲಕ್ಷಗಟ್ಟಲೇ ಬೆಲೆಬಾಳುವ ಮೀನುಗಳನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕುವ ಮೂಲಕ ಅವಮಾನ ಮಾಡಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಮುಂದಿನ ದಿನಗಳಲ್ಲಿ ಗೋವಾ ರಾಜ್ಯಕ್ಕೆ ಅಗತ್ಯವಾಗಿರುವ ಹಾಲು, ತರಕಾರಿಗಳನ್ನು ಕರ್ನಾಟಕದಿಂದ ಸಾಗಿಸುವುದನ್ನು ಬಂದ್ ಮಾಡುವುದಾಗಿ ಮೀನುಗಾರರು ಗೋವಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.