Publish Date: Fri, 07 Sep 2018 (14:12 IST)
Updated Date: Fri, 07 Sep 2018 (14:15 IST)
ಮನೆಯಂಗಳದಲ್ಲಿ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಕಳವು ಮಾಡಿದ್ದ ಆರೋಪಿ ಹಾಗೂ ಆತನ ನಾಲ್ವರು ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಮಾರುತಿಗಲ್ಲಿಯ ನಿವಾಸಿ ತಿಲಕ್ ಮೋಹನ ಬೈಂದೂರು ಎನ್ನುವವರು ತಮ್ಮ ಮನೆ ಎದುರು ರಾತ್ರಿ ಬೈಕ್ ನಿಲ್ಲಿಸಿಟ್ಟಿದ್ದರು. ಬೆಳಗಾಗುವುದರಲ್ಲಿ ಅದು ನಾಪತ್ತೆಯಾಗಿತ್ತು. ಈ ಬಗ್ಗೆ ಅವರು ನಗರ ಠಾಣೆಗೆ ದೂರು ನೀಡಿದ್ದರು.
ಅದರ ನಂತರ ನಗರದ ಮಾಲಾದೇವಿ ಮೈದಾನದ ಎದುರಿನ ಮಹಾಲಕ್ಷ್ಮೀ ಗೃಹೋಪಯೋಗಿ ಮಳಿಗೆಯ ಎದುರು ನಿಲ್ಲಿಸಿಟ್ಟಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಕಳವು ಮಾಡಲು ಯತ್ನಿಸಲಾಗಿತ್ತು. ಇದು ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಸಿಪಿಐ ಶಿವಕುಮಾರ್ ನೇತೃತ್ವದಲ್ಲಿ ಕಳ್ಳರ ಪತ್ತೆಗೆ ವಿಶೇಷ ಅಪರಾಧ ಪತ್ತೆ ದಳವೊಂದು ರಚನೆಯಾಗಿತ್ತು. ಈ ತಂಡವು ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವ್ಯಕ್ತಿಯ ಮುಖ ಚಹರೆಯನ್ನು ಪತ್ತೆಮಾಡಿ
ಆರೋಪಿಯಾದ ಸಿದ್ದಾಪುರ ಮೂಲದ ಜಾನ್ ಮೈಕಲ್ ರೋಡ್ರಿಗಸ್ನ ಬಗ್ಗೆ ಮಾಹಿತಿ ಕಲೆಹಾಕಿತು. ಶಿರಸಿಯಲ್ಲಿ ವಾಸಿಸುತ್ತಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ವೇಳೆ ಆತ ತಪ್ಪೊಪ್ಪಿಕೊಂಡು, ಆತನ ಸಹಚರರಾದ ಶಿರಸಿಯ ನಿಯಾಜ್ ಶೇಖ್, ಮಹಮದ್ ರೆಹಮತ್ ಉಲ್ಲಾ, ಸೂರಜ್ ಸೂರಿ, ಅಬ್ದುಲ್ ರೆಹಮಾನ್ ನವೀದ್ ಎನ್ನುವವರ ಮಾಹಿತಿಯನ್ನೂ ನೀಡಿದ್ದ. ಅದರಂತೆ ಪೊಲೀಸರು ಐವರನ್ನೂ ಬಂಧಿಸಿ, ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
‘ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಜಾನ್, ಅಪಘಾತದಿಂದಾಗಿ ಕಾಲಿಗೆ ಗಾಯಪಡಿಸಿಕೊಂಡಿದ್ದ. ಇದರಿಂದಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ. ಹೀಗಾಗಿ ನಾಲ್ವರೊಂದಿಗೆ ಸೇರಿ ಕಳವು ಕೆಲಸಕ್ಕೆ ಇಳಿದಿದ್ದ’ ಎಂದು ಪೊಲೀಸರಿಗೆ ಜಾನ್ ಮಾಹಿತಿ ನೀಡಿದ್ದಾರೆ.
‘ಬಂಧಿತರಿಂದ ಎರಡು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ರಾಯಲ್ ಎನ್ಫೀಲ್ಡ್ನ ವಾರಸುದಾರರ ಪತ್ತೆಯಾಗಿದೆ. ಇನ್ನೊಂದು ಪಲ್ಸರ್ 200 ಸಿಸಿ ಬೈಕ್ನ ವಾರಸುದಾರರ ಮಾಹಿತಿ ಕಲೆಹಾಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.