Publish Date: Thu, 03 Feb 2022 (21:34 IST)
Updated Date: Thu, 03 Feb 2022 (21:37 IST)
ಕಾಡಾನೆ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ನಡೆದಿದೆ. ಕೊಳವಿಗೆ ಗ್ರಾಮದ ರೈತ ರಾಜೇಶ್(50) ಮೃತಪಟ್ಟ ರೈತ.
ಈತ ತನ್ನ ಮನೆ ಹಿತ್ತಲಿನಲ್ಲಿ ದನಗಳಿಗೆ ಹುಲ್ಲು ತರಲು ತೆರಳಿದ್ದಾಗ ಪಕ್ಕದ ಜಮೀನಿನಲ್ಲಿ ವೀರನಹೊಸಹಳ್ಳಿ ಅರಣ್ಯ ವಲಯದಿಂದ ಬಂದು ನಿಂತಿದ್ದ ಒಂಟಿ ಸಲಗ ಹಿಂದೆಯಿಂದ ಬಂದು ಏಕಾಏಕಿ ದಾಳಿ ನಡೆಸಿ, ಕೊಂದು ಹಾಕಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡುವ ಭರವಸೆ ನೀಡಿದರು.
ಮನೆಯನ್ನು ಜಖಂಗೊಳಿಸಿದ ಒಂಟಿ ಸಲಗ
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ವ್ಯಾಪ್ತಿಯ ಕಾಡಂಚಿನ ಗ್ರಾಮ ನಾಗಪುರ ಹಾಡಿಯಲ್ಲಿ ಒಂಟಿ ಸಲಗವೊಂದು ರಾಜು ಎಂಬುವವರ ಮನೆಯ ಮುಂಭಾಗವನ್ನು ಜಖಂಗೊಳಿಸಿದೆ. ಕಾಡಿನಿಂದ ಬಂದಿದ್ದ ಈ ಒಂಟಿ ಸಲಗೆ ಮನೆ ಮೇಲೆ ದಾಳಿ ನಡೆಸಿತು. ಇದರಿಂದಾಗಿ ಮನೆಯೊಳಗೆ ಇದ್ದ ಕುಟುಂಬ ಜೀವ ಭಯದಿಂದ ಕೂಗಾಡಿದರು. ಅಲ್ಲಿಂದ ತೆರಳಿದ ಒಂಟಿ ಸಲಗ ಜಮೀನಿನಲ್ಲಿ ಬೆಳೆದ ಫಲಸನ್ನು ಸಹ ನಾಶ ಮಾಡಿದೆ. ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳು ಬರದಂತೆ ಗೇಟ್ ಅಳವಡಿಸಿದ್ದರೂ, ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.