Publish Date: Sat, 03 Sep 2022 (12:38 IST)
Updated Date: Sat, 03 Sep 2022 (12:05 IST)
ರಾಮನಗರ : ಸಾಯಿಬಾಬಾನ 3ನೇ ಅವತಾರ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ವಿರುದ್ಧ ರಾಮನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಅಕಾರಾಂ ಸರಗಾರ್ ಕಳೆದ 8 ತಿಂಗಳ ಹಿಂದೆ ಚನ್ನಪಟ್ಟಣಕ್ಕೆ ಬಂದಿದ್ದನು. ಈ ವೇಳೆ ತಾನು ಪ್ರೇಮ ಸಾಯಿ, ದೇವ ಮಾನವ ಎಲ್ಲರ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದನು.
ಸಿಂಧೂ ಎಂಬುವವರ ತೋಟದ ಮನೆಯಲ್ಲಿ ಪ್ರತಿನಿತ್ಯ ಭಜನೆ, ಪೂಜೆ ಮಾಡಿ ಹಣ ವಸೂಲಿ ಮಾಡುತ್ತಿದ್ದನು. ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಟ್ರಸ್ಟ್ ಹೆಸರಲ್ಲಿ ಇಲ್ಲಿಯವರೆಗೂ ಆರೋಪಿ ಸುಮಾರು 1.5 ಕೋಟಿ ರೂ. ಹಣ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ತೋಟದ ಮನೆಯನ್ನೇ ತನ್ನ ಹೆಸರಿಗೆ ಬರೆದುಕೊಡುವಂತೆ ಸಿಂಧೂ ಅವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಮಹಿಳೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದು, ಪ್ರಕರಣ ಸಂಬಂಧ 7 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.