Publish Date: Thu, 07 Sep 2017 (17:21 IST)
Updated Date: Thu, 07 Sep 2017 (17:24 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹೋದರಿ ಕವಿತಾ ಲಂಕೇಶ್ ನೀಡಿರುವ ದೂರಿನ ಪ್ರತಿ ವೆಬ್ ದುನಿಯಾ ಕನ್ನಡಕ್ಕೆ ಲಭ್ಯವಾಗಿದೆ.
ಸೆ.5 ರಂದು ಅಂದರೆ ಗೌರಿ ಲಂಕೇಶ್ ಹತ್ಯೆಯಾದ ದಿನ ರಾತ್ರಿ 8.26ಕ್ಕೆ ಅವರ ತಾಯಿ ಇಂದಿರಾ ಲಂಕೇಶ್ ದೂರವಾಣಿಗೆ ಅನಾಮಧೇಯ ವ್ಯಕ್ತಿ 988604**** ನಂಬರ್ ನಿಂದ ಕರೆ ಮಾಡಿದ್ದಾನೆ. ಗೌರಿ ಲಂಕೇಶ್ ಗೆ ಏನೋ ಆಗಿದೆ ತಕ್ಷಣ ಬನ್ನಿ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ವಿಷಯ ತಿಳಿದ ಕೂಡಲೇ ಆಕೆಯ ಸಹೋದರಿ ಕವಿತಾ ಲಂಕೇಶ್ ಸ್ಥಳಕ್ಕೆ ಬಂದಿದ್ದಾರೆ. ಅಷ್ಟೊತ್ತಿಗೆ ಗೌರಿ ಲಂಕೇಶ್ ಕಾರು(ಕೆಎ-05 ಎಂಆರ್-3782) ಮನೆಯ ಗೇಟ್ ಎದುರು ನಿಂತಿತ್ತು. ಕೂಡಲೇ ಒಳಗೆ ಹೋಗಿ ನೋಡಿದಾಗ ಗೌರಿ ಲಂಕೇಶ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕಾಟ್ರೇಡ್ಜ್ ಪೀಸ್ ಗಳು ಬಿದ್ದಿದ್ದು, ಯಾರೋ ಶೂಟ್ ಮಾಡಿದ್ದಾರೆ. ಆಕೆಯ ಎದೆಗೆ 3 ಗುಂಡುಗಳು ತಗುಲಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ದುಷ್ಕರ್ಮಿಗಳು ದುರುದ್ದೇಶದಿಂದ ನನ್ನ ಅಕ್ಕನನ್ನು ಹತ್ಯೆ ಮಾಡಿದ್ದಾರೆ ಎಂದು ಕವಿತಾ ಲಂಕೇಶ್ ದೂರು ನೀಡಿದ್ದಾರೆ. ಈ ಅನ್ವಯ ಐಪಿಸಿ ಸೆಕ್ಷನ್ 302 ಮತ್ತು ಶಸ್ತ್ರಾಸ್ತ್ರ ಕಾಯ್ದೆ 25 ಅಡಿಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.