Publish Date: Sun, 18 Feb 2024 (17:27 IST)
Updated Date: Sun, 18 Feb 2024 (17:55 IST)
ಕಾಂಗ್ರೆಸ್ ನ ಜನಸ್ಪಂದನ ಕಾರ್ಯಕ್ರಮವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವಿನ ಇರಿಸುಮುರಿಸಿಗೂ ಸಹ ವೇದಿಕೆಯಾಯಿತು. ಇಬ್ಬರೂ ವೇದಿಕೆ ಹಂಚಿಕೊಂಡಿದ್ದರೂ ಸಹ, ಮುನಿರತ್ನ ಮಾತನಾಡಲು ಯತ್ನಿಸಿದರೂ ಸಹ ಡಿಕೆಶಿ ಮುಖ ತಿರುಗಿಸಿಕೊಂಡು ಕುಳಿತಿದ್ದು ಕಾರ್ಯಕ್ರಮವಿಡೀ ಸಾಮಾನ್ಯ ದೃಶ್ಯವಾಗಿತ್ತು. ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೆಲ ತಿಂಗಳ ಹಿಂದಷ್ಟೇ ಮುನಿರತ್ನ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದಿದ್ದರು.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ಮೂಲಕ ಮೈತ್ರಿ ಸರ್ಕಾರದ ಅಂತ್ಯಕ್ಕೆ ಕಾರಣವಾಗಿದ್ದ ಶಾಸಕರ ಪೈಕಿ ಮುನಿರತ್ನ ಮುಂಚೂಣಿಯಲ್ಲಿದ್ದರು.ಇದೇ ಕಾರಣಕ್ಕಾಗಿ ಇಬ್ಬರ ನಡುವೆ ಶೀತಲ ಸಮರವೂ ನಡೆಯುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರ ಮತಕ್ಷೇತ್ರ ಆರ್ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಎದುರು ಪ್ರಯಾಸದ ಗೆಲುವು ಸಾಧಿಸಿದ್ದರು. ಕ್ಷೇತ್ರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 200 ಕೋಟಿ ರೂ. ಗಳಿಗೂ ಹೆಚ್ಚು ಅವ್ಯವಹಾರ ನಡೆದಿದೆಯೆಂಬ ಆರೋಪದ ಮೇಲೆ ಕಾಂಗ್ರೆಸ್ ಸರ್ಕಾರ ಮುನಿರತ್ನ ಕ್ಷೇತ್ರದ ಬಿಲ್ ಗಳನ್ನು ತಡೆಹಿಡಿದಿತ್ತು.