Publish Date: Thu, 09 Dec 2021 (09:33 IST)
Updated Date: Thu, 09 Dec 2021 (09:35 IST)
ಹಾಸನ : ಸೆಲ್ಫಿ ವೀಡಿಯೋ ಮಾಡಿ ಅಳಿಯನ ಮನೆ ಬಾಗಿಲಲ್ಲಿ ಮಾವ ನೇಣಿಗೆ ಶರಣಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಮೃತ ವ್ಯಕ್ತಿ. ತನ್ನ ಮಗಳ ಸಾವಿಗೆ ಅಳಿಯ ಹಾಗೂ ಅವನ ಮನೆಯವರೇ ಕಾರಣ ಎಂದು ಹೇಳಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಾಗರಾಜ್ ಮಗಳು ಹೇಮಶ್ರೀ ಅ.30ರಂದು ಸಾವನ್ನಪ್ಪಿದ್ದಳು. ಇಂದು ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಬಂದಿದ್ದರು. ಆದರೆ ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಹೋಗಿದ್ದರು. ಬೆಳಗ್ಗೆಯಿಂದ ಕಾದು ನಂತರ ಮೊಬೈಲ್ನಲ್ಲಿ ವೀಡಿಯೋ ಮಾಡಿ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ನನ್ನ ಮಗಳು ಸಾವನ್ನಪ್ಪಿದ್ದಾಳೆ. ನನ್ನ ಮಗಳ ಸಾವಿಗೆ ಪತಿ ಪ್ರವೀಣ್, ಅತ್ತೆ ಭದ್ರಮ್ಮ ಕಾರಣ. ನನಗೆ, ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾರಿಗೂ ಆಗಬಾರದು. ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ಮೊಬೈಲ್ ನಲ್ಲಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಮಾಳೆಗೆರೆ ಗ್ರಾಮದ ಪ್ರವೀಣ್ಗೆ ಹೇಮಶ್ರೀಯನ್ನು ಮದುವೆ ಮಾಡಿಕೊಡಲಾಗಿತ್ತು. ಪ್ರವೀಣ್ ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದರು. ಮದುವೆಯಾದಾಗಿನಿಂದಲೂ ಅತ್ತೆ ಭದ್ರಮ್ಮ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ 1.50 ಲಕ್ಷ ನಗದು, 40 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು.
ಗರ್ಭಿಣಿ ವೇಳೆ ಹೇಮಶ್ರೀಯನ್ನು ಪ್ರವೀಣ್ ತವರು ಮನೆಗೆ ಕಳುಹಿಸಿದ್ದರು.
ಅ.29ರಂದು ಹೊಟ್ಟೆಯಲ್ಲಿಯೆ ಮಗು ಸಾವನ್ನಪ್ಪಿತ್ತು. ಇದಾದ ಎರಡು ದಿನಗಳ ಬಳಿಕ ಹೇಮಶ್ರೀ ಸಾವನ್ನಪ್ಪಿದ್ದರು. ಗಂಡನ ಊರು ಮಾಳೆಗೆರೆಯಲ್ಲಿ ಹೇಮಶ್ರೀ ಅಂತ್ಯಕ್ರಿಯೆ ನಡೆಸಲಾಗಿತ್ತು.ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.