Publish Date: Thu, 04 Aug 2022 (13:27 IST)
Updated Date: Thu, 04 Aug 2022 (15:08 IST)
ಧಾರವಾಡ : ಗಣೇಶ ಕೂರಿಸಲು ಯಾರು ಕೂಡ ಅನುಮತಿ ತೆಗೆದುಕೊಳ್ಳಲು ಹೋಗಬೇಡಿ.
ಮೈಕ್ ಹಾಕಲು ನಾನು ಸಹ ಅನುಮತಿ ಮೊರೆ ಹೋಗುವುದಿಲ್ಲ ಎಂದು ಪೊಲೀಸರು ಹಾಗೂ ಸರ್ಕಾರಕ್ಕೆ ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
ಗಣೇಶೋತ್ಸವ ಕುರಿತು ಮಾತನಾಡಿದ ಅವರು, ಗಣೇಶೋತ್ಸವ ಧಾರ್ಮಿಕ ಶಾಸ್ತ್ರೋಕ್ತ ವಿಧಿ ವಿಧಾನಗಳ ಪ್ರಕಾರ ನಡೆದುಕೊಂಡು ಬಂದ ಸಂಪ್ರದಾಯ. ಜಾತಿ, ಧರ್ಮ ಬಿಟ್ಟು ಎಲ್ಲರೂ ಆಚರಿಸಿಕೊಂಡು ಬಂದಿದ್ದಾರೆ. ಗಣೇಶೋತ್ಸವಕ್ಕೆ ಕರ್ನಾಟಕದಲ್ಲಿ ಸರ್ಕಾರದಿಂದ ಕಿರಿಕಿರಿಯಾಗುತ್ತಿದೆ.
ಯಾಕಾದ್ರು ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವಂತೆ ಆಗಿದೆ. ಸರ್ಕಾರ ನಿರ್ಬಂಧ ಹಾಕಬಾರದು. ಗಣೇಶೋತ್ಸವಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಸರ ಹಾಗೂ ಶಬ್ದ ಮಾಲಿನ್ಯದ ಬಗ್ಗೆ ವಿಚಾರ ಮಾಡೋಣ. ನಮ್ಮ ಉತ್ಸಾಹಕ್ಕೆ ಭಂಗ ತರುವಂತಹ ಕಾರ್ಯವನ್ನು ವಿರೋಧಿಸುತ್ತೇವೆ. ಎಷ್ಟೊಂದು ಕಡೆ ಅನುಮತಿ ಪಡೆಯಬೇಕು? ವಿದ್ಯುತ್, ಪೆಂಡಾಲ್, ಪೊಲೀಸ್, ಪಾಲಿಕೆ ಹಾಗೂ ಅಗ್ನಿಶಾಮಕ ದಳದ ಅನುಮತಿ ಪಡೆಯಬೇಕು.
ಇದಕ್ಕೆಲ್ಲ ಓಡಾಡಬೇಕಾಗಿದೆ. ಇದರ ಮಧ್ಯೆ ಪೊಲೀಸರ ಕಿರಿಕಿರಿ ಹೆಚ್ಚಾಗಿದೆ. ನಮಗೆ ಸ್ವಾತಂತ್ರ್ಯ ಇಲ್ಲಾ? ಈ ರೀತಿ ಕಟ್ಟಪ್ಪಣೆ ಹಾಕಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.