ಬೆಂಗಳೂರು: ದೆಹಲಿಯ ಕೆಂಪು ಕೋಟೆ ಸಮೀಪ ಬಾಂಬ್ ಸ್ಫೋಟ ಆಗುವುದಕ್ಕೆ ಮುಂಚೆ ಹಲವರನ್ನು ನಮ್ಮ ಸರಕಾರ ಬಂಧಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸ್ಫೋಟ 10ರಂದು ಆಗಬೇಕೆಂಬ ಉದ್ದೇಶ ಅವರದು ಆಗಿರಲಿಲ್ಲ ಎಂಬುದು ಈಗ ಬೆಳಕಿಗೆ ಬಂದಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಯೋಧ್ಯೆ, ದೇಶದ ಇತರ ಕಡೆಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಉದ್ದೇಶವಿತ್ತು ಎಂದು ತಿಳಿಸಿದರು.
ನಮ್ಮ ಬೇಹುಗಾರಿಕೆ ದಳ ಅತ್ಯಂತ ಸಮರ್ಥವಾಗಿತ್ತು. ಆದ್ದರಿಂದ ಇವರೆಲ್ಲರನ್ನೂ ಮೊದಲೇ ಬಂಧಿಸಿದ್ದರು. 2900 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದರು. ಇದಾದ ಮೇಲೆ ವೈದ್ಯರ ಸಿಂಡಿಕೇಟ್ ಹೀಗೆ ಮಾಡಿದೆ. ಈಗ ನಾವು ಯಾವ ವೈದ್ಯರನ್ನು ನಂಬಬೇಕೋ ಗೊತ್ತಾಗದಂತಾಗಿದೆ ಜನರ ಪರಿಸ್ಥಿತಿ ಎಂದು ತಿಳಿಸಿದರು.
ಭಯೋತ್ಪಾದನೆಗೆ ಧರ್ಮ ಇಲ್ಲ ಎನ್ನುತ್ತೇವೆ. ಆದರೆ, ಈಗ ನೋಡಿದರೆ ಭಯೋತ್ಪಾದನೆಗೆ ಸಂಬಂಧಿಸಿ ಬಂಧಿತರಾಗುವವರೆಲ್ಲರೂ ಒಂದೇ ಧರ್ಮದವರು ಎಂದು ವಿಶ್ಲೇಷಿಸಿದರು. ಈ ಡಾಕ್ಟರ್ಗಳ ಸಿಂಡಿಕೇಟ್ ಎಂಬುದು ಧರ್ಮಾಂಧರ ಸಿಂಡಿಕೇಟ್ ಎಂದು ಟೀಕಿಸಿದರು. ಅವರು ನಡೆಸುವ ದುಷ್ಕøತ್ಯ ಧರ್ಮಾಂಧರ ಭಯೋತ್ಪಾದನೆ ಎಂದು ಆಕ್ಷೇಪಿಸಿದರು.
ಇದು ಅಂತರರಾಷ್ಟ್ರೀಯ ಭಯೋತ್ಪಾದನೆಯ ವಿಷಯ. ನಾವು ಈ ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ತಿಳಿಸಿದರು. ಭಾರತದ ವಿರುದ್ಧ ಹಗೆತನ ಸಾಧಿಸುವ ದೇಶಗಳು ಮಾಡುವ ಕೃತ್ಯ ಇದಾಗಿದೆ ಎಂದು ವಿಶ್ಲೇಷಿಸಿದರು. ಎಲ್ಲ ದೇಶದವರು ಸೇರಿ ಇಂಥ ಭಯೋತ್ಪಾದನೆಯನ್ನು ನಿಗ್ರಹಿಸಬೇಕು. ಆದರೆ, ಉಗ್ರವಾದ ಮುಂದುವರೆದಿದೆ. ಇಂಥ ಸಂದರ್ಭದಲ್ಲೂ ಕಾಂಗ್ರೆಸ್ ರಾಜಕೀಯ ಬೆರೆಸುತ್ತಿದೆ ಎಂದು ದೂರಿದರು.
ಚುನಾವಣೆಗೆ 2 ದಿನ ಮುಂಚೆ ಯಾಕೆ ಸ್ಫೋಟ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಳಿದ್ದಾರೆ. ಇದು ನನಗೂ ಸಂಶಯವೇ ಎಂದರು. ದೆಹಲಿಯ ಬಾಂಬ್ ಸ್ಫೋಟದಿಂದ ಬಿಹಾರದ ಚುನಾವಣೆ ಮೇಲೆ ಪರಿಣಾಮ ಆಗಲಿದ್ದು, ಕಾಂಗ್ರೆಸ್ಸಿಗೆ ಲಾಭ ಆಗಲಿದೆ; ಬಿಜೆಪಿಗೆ ನಷ್ಟವಾಗುತ್ತದೆ ಎಂದಿದ್ದಾರೆ. ಇದೆಂಥ ರಾಜಕೀಯ? ಒಬ್ಬ ಮುಖ್ಯಮಂತ್ರಿ ಆಡತಕ್ಕ ಮಾತುಗಳೇ ಇವು ಎಂದು ಕೇಳಿದರು.