Publish Date: Sun, 01 Jan 2023 (15:55 IST)
Updated Date: Sun, 01 Jan 2023 (16:02 IST)
ಮಹದಾಯಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಡಿಪಿಆರ್ಗೆ ಒಪ್ಪಿಗೆ ನೀಡಿರುವ ಆದೇಶದಲ್ಲಿ ಕೆಳಗಡೆ ಸಹಿ ಇದೆ. ಕಾಂಗ್ರೆಸ್ ಯಾವ ಉದ್ದೇಶಕ್ಕೆ ಆರೋಪಿಸುತ್ತಿದೆ ಗೊತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಹದಾಯಿಗಾಗಿ ನಾವು ಹೋರಾಟ ಮಾಡಿದ್ವಿ, ಅವರೂ ಮಾಡಿದ್ದರು. ಈಗ ಹೋರಾಟಕ್ಕೆ ತಾರ್ಕಿಕ ಜಯ ಸಿಕ್ಕಿದೆ. 20-25 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಈ ವೇಳೆ ಲೋಪದೋಷ ಹುಡುಕುವುದು ಅವರ ಮನಸ್ಥಿತಿ ತೋರಿಸುತ್ತೆ. ಕಾಂಗ್ರೆಸ್ ನಾಯಕರ ಟೀಕೆ ಟಿಪ್ಪಣಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. MOF ಕ್ಲಿಯರೆನ್ಸ್ ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿದರು. ಇನ್ನು ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಮೀಸಲಾತಿ ನೀಡಲು ಸಂವಿಧಾನಾತ್ಮಕವಾಗಿ ಯಾವುದೇ ತೊಡಕಿಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಆಯೋಗದ ಅಂತಿಮ ವರದಿಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರದ ಉದ್ದೇಶ ಹೇಳಿದ್ದೇವೆ. ಅಂತಿಮ ವರದಿಯಲ್ಲಿ ಅಂಕಿ ಅಂಶಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಮೀಸಲಾತಿ ಜಾರಿ ವಿಚಾರದಲ್ಲಿ ಸಂಬಂಧಪಟ್ಟವರ ಜತೆ ಚರ್ಚಿಸುತ್ತೇವೆ ಎಂದರು. ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕೆಲ ವರ್ಗದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಹಿನ್ನಡೆಯಾಗಿರುವುದು ನಿಜ. ಅವರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಬೇಕಾದರೆ ಸ್ಪಷ್ಟೀಕರಣ ಕೊಡುತ್ತೇವೆ, ಯಾರಿಗೂ ಅನ್ಯಾಯ ಮಾಡಲ್ಲ. ವಿರೋಧ ಪಕ್ಷದವರು ತಾವು ಅಧಿಕಾರದಲ್ಲಿದ್ದಾಗ ಬೇಡಿಕೆ ಈಡೇರಿಸಲಿಲ್ಲ. ಈಗ ನಾವು ಜಾರಿ ಮಾಡುತ್ತಿರುವುದುರಿಂದ ಅವರಿಗೆ ಸಮಸ್ಯೆಯಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.