Publish Date: Sat, 29 Sep 2018 (15:38 IST)
Updated Date: Sat, 29 Sep 2018 (15:40 IST)
ಸಾಲದಿಂದ ಬೇಸತ್ತಿರುವ ಯುವಕನೊಬ್ಬ ಮನುಕುಲ ನಾಚುವಂತಹ ಘಟನೆಗೆ ಮುಂದಾಗಿದ್ದಾನೆ.
ನನ್ನ ಕಿಡ್ನಿ ಸೇಲ್ಗಿದೆ ಎಂದು ಟೀ ಅಂಗಡಿ ಮುಂದೆ ಫಲಕ ಹಾಕಿರುವ ವಿಚಿತ್ರ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. 26 ವರ್ಷದ ಯುವಕ ವಿನೋದ್ ಕುಮಾರ್ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ, ಮಧುರ ಟೀ ಸ್ಟಾಲ್ ಎಂಬ ಅಂಗಡಿ ಇಟ್ಟುಕೊಂಡಿದ್ದಾನೆ. ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ವಿನೋದ್ ಕುಮಾರ್ ಮನೆ ಕಟ್ಟಿಸುವುದು ಸೇರಿದಂತೆ ಹಲವಾರು ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾನಂತೆ. ತಾನು ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟಲೂ ಕಷ್ಟವಾಗಿದೆ. ಹಣ ಕೊಟ್ಟವರಿಗೆ ಹಣ ವಾಪಸ್ ಕೊಡುವುದು ನ್ಯಾಯ. ಹೀಗಾಗಿ ನಮ್ಮ ಜಮೀನನ್ನು ಅಡವಿಟ್ಟು ಸಾಲ ತೀರಿಸೋಣ ಅಂತಿದ್ದೇನೆ. ಆದರೆ ನಾಡ ಕಚೇರಿಯಲ್ಲಿ ಜಮೀನಿನ ಸ್ಕೆಚ್ ಕೊಡಲು ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ನನ್ನ ಕಿಡ್ನಿ ಸೇಲ್ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ ಎಂದಿದ್ದಾನೆ.
ಕಿಡ್ನಿ ಬೇಕಾದವರು ನನಗೆ ಹಣ ನೀಡಿ ಕಿಡ್ನಿ ಕೊಂಡುಕೊಳ್ಳಿ ಎಂದು ವಿನೋದ್ ಕುಮಾರ್ ತನ್ನ ಟೀ ಅಂಗಡಿ ಮುಂದೆ ಬರೆದು ಚೀಟಿ ಅಂಟಿಸಿದ್ದಾನೆ. ಇನ್ನು ವಿನೋದ್ ಕುಮಾರ್ ಕಿಡ್ನಿ ಮಾರಾಟಕ್ಕಿದೆ ಎಂದು ಬರೆದು ಅಂಟಿಸಿರುವುದನ್ನು ನೋಡಿದ ಸ್ಥಳೀಯರು, ಈ ರೀತಿ ಮಾಡುವುದು ತಪ್ಪು ಎಂದು ಬುದ್ದಿ ಹೇಳಿದ್ದಾರೆ. ಆದರೆ ಯಾರ ಬುದ್ದಿ ಮಾತಿಗೂ ಕಿವಿಗೊಡದ ವಿನೋದ್ ಕುಮಾರ್, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ಕಿಡ್ನಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದೇನೆ ಅಂತಿದ್ದಾನೆ.