Publish Date: Fri, 26 Jun 2026 (22:48 IST)
Updated Date: Fri, 26 Jun 2026 (22:51 IST)
ಮೈಸೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹಾಗೂ ತಂಡ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಲು ಸ್ಥಳ ನಿಗದಿಪಡಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ ಇಂದು ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಹಾಗೂ ವಿಜಯನಗರದ ಐಶ್ವರ್ಯ ಪೆಟ್ರೋಲ್ ಪಂಪ್ ಬಳಿಯ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಅಕ್ಟೋಬರ್ 17 ಮತ್ತು 18ರಂದು ಕಂಬಳ ಆಯೋಜಿಸಲು ಯೋಚಿಸಲಾಗಿದೆ. ಸಾತಗಳ್ಳಿಯ ವಿಟಿಯು ಕಾಲೇಜು ಬಳಿಯ ಮೈದಾನದ ಜಾಗವನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನಕ್ಷೆ ಸಮೇತ ವಿವರಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.
₹ 5- 8 ಕೋಟಿ ವೆಚ್ಚದಲ್ಲಿ ಕಂಬಳ ನಡೆಯುತ್ತಿದ್ದು, ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇನ್ನೂ 8 ಸಾವಿರದ ಆಸನ ವ್ಯವಸ್ಥೆ ಮಾಡುತ್ತೇವೆ. ಕಂಬಳದೊಂದಿಗೆ ಕರಾವಳಿಯ ತಿನಿಸುಗಳ ಮಳಿಗೆಯೂ ಇರಲಿದೆ. ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕವಾಗಿ ಎರಡು ಬೋರ್ವೆಲ್ ತೆಗೆಸಲಿದ್ದೇವೆ. ಕುಡಿಯುವ ನೀರನ್ನು ಬಳಸುವುದಿಲ್ಲ. ಜನರಿಗೆ ತೊಂದರೆಯಾಗದಂತೆ ದಸರಾ ಪ್ರೇಕ್ಷಕರಿಗೆ ಕಂಬಳ ವೀಕ್ಷಣೆಗೆ ಸಹಾಯವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಇನ್ನೂ ಈ ಕಂಬಳದಲ್ಲಿ 150 ರಿಂದ 200 ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು ಮಡಿಕೇರಿಯಲ್ಲಿ ಕೋಣಗಳನ್ನು ಇಳಿಸಿ ಅವುಗಳಿಗೆ ಎರಡು ಗಂಟೆ ವಿಶ್ರಾಂತಿ ನೀಡಿದ ಬಳಿಕ ಮೈಸೂರಿಗೆ ಕಂಬಳದ ಹಿಂದಿನ ದಿನವೇ ಆಗಮಿಸಲಿದ್ದೇವೆ. ಆ ದಿನ ಅಭ್ಯಾಸ ನಡೆಸಿದ ಬಳಿಕ ಮರುದಿನ ಬೆಳಿಗ್ಗಿನಿಂದ ಎರಡು ದಿನ ಸ್ಪರ್ಧೆ ನಡೆಯಲಿದೆ. ಕಂಬಳಕ್ಕೆ 20 ಎಕರೆ ಜಾಗದ ಅವಶ್ಯಕತೆ ಇದೆ. 10 ಎಕರೆಯಲ್ಲಿ ವಾಹನ ನಿಲುಗಡೆಗೆ ಬೇಕಾಗುತ್ತವೆ ಎಂದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ