Publish Date: Thu, 25 Jul 2024 (12:25 IST)
Updated Date: Thu, 25 Jul 2024 (12:28 IST)
ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯವರ ಹಗರಣದ ಲಿಸ್ಟ್ ಹೊರಗೆಳೀತಿವಿ ಹುಷಾರ್ ಎಂದಿದ್ದಾರೆ.
ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಯಾದಾಗ ಮೊದಲು ಅವರು ಮಾತನಾಡಿದರು. ನಾವು ಮಾತನಾಡುವಾಗ ಕೇಳಿಸಿಕೊಳ್ಳಲಿಲ್ಲ. ಯಾವಾಗ ನಾವು ಅವರ ಕಾಲದ ಹಗರಣದ ಬಗ್ಗೆ ಪಟ್ಟಿ ತೆಗೆದ್ವೋ ಆಗ ಈ ರೀತಿ ಪ್ರತಿಭಟನೆಯ ನಾಟಕವಾಡ್ತಿದ್ದಾರೆ ಎಂದು ಇಂದು ಸದನ ಆರಂಭಕ್ಕೆ ಮುನ್ನ ಮಾಧ್ಯಮಗಳಿಗೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನಮ್ಮದು ಹಗರಣ ಆಗಿಲ್ಲ ಅಂತ ಹೇಳಲ್ಲ. ಯಾರೋ ಒಬ್ಬ ಅಧಿಕಾರಿಯಿಂದ 80 ಕೋಟಿ ಅವ್ಯವಹಾರ ಆಗಿದೆ. ಉಪ್ಪು ತಿಂದವ ನೀರು ಕುಡಿಯುತ್ತಾನೆ. ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುತ್ತದೆ. ಆದರೆ ಅವರ ಕಾಲದಲ್ಲಿ ಕೋಟಿಗಟ್ಟಲೆ ಅವ್ಯವಹಾರ ಆಗಿಲ್ವಾ? ಅವರದ್ದು ತೆಗೆತೀವಿ ಎಂದಿದ್ದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಲ್ಲರೂ ಅಕ್ರಮವಾಗಿ ಸೈಟು ಹಂಚಿಕೊಂಡಿದ್ದಾರೆ. ಇದರ ಲೆಕ್ಕ ತೆಗಿತೀವಿ ನೋಡ್ತಾ ಇರಿ ಎಂದು ಎಚ್ಚರಿಕೆ ನೀಡಿ ಸದನ ಕಲಾಪಕ್ಕೆ ತೆರಳಿದ್ದಾರೆ. ಬಳಿಕ ಸದನದಲ್ಲೂ ಡಿಕೆಶಿ ಪ್ರತಿಪಕ್ಷಗಳನ್ನು ಸೈಲೆಂಟ್ ಆಗಿಸಿದ್ದಾರೆ. ಸ್ಪೀಕರ್ ಆಸನದ ಮುಂಭಾಗ ನಿಂತು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಿದ್ದ ಪ್ರತಿಪಕ್ಷ ಶಾಸಕರನ್ನು ಸುಮ್ಮನಿರುವಂತೆ ಕೈ ಸನ್ನೆ ಮೂಲಕವೇ ಸೈಲೆಂಟಾಗಿಸಲು ಪ್ರಯತ್ನಿಸಿದ್ದಾರೆ.