Publish Date: Wed, 24 Jul 2024 (14:43 IST)
Updated Date: Wed, 24 Jul 2024 (14:48 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಥಿತರಾಗಿರುವ ನಟ ದರ್ಶನ್ ಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಡಿಕೆಶಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇದರ ನಡುವೆ ಡಿಕೆ ಶಿವಕುಮಾರ್ ದರ್ಶನ್ ಪುತ್ರ ವಿನೀಶ್ ಶಾಲೆ ಬಿಟ್ಟ ವಿಚಾರದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಮಗ ನಮ್ಮ ಸ್ಕೂಲಲ್ಲೇ ಓದುತ್ತಿದ್ದ. ನನಗೆ ನೆನಪಿದೆ. ಆದರೆ ಕಳೆದ ವರ್ಷ ಪೋಷಕರು ಬರಲೇಬೇಕೆಂದು ಅವರನ್ನು ಕರೆಸಿ ಬುದ್ಧಿವಾದ ಎಲ್ಲಾ ಹೇಳಿದ್ರು. ನಮ್ಮ ಶಾಲೆಯಲ್ಲಿ ಮಕ್ಕಳ ವರ್ತನೆ ಬಗ್ಗೆ ಪೋಷಕರನ್ನು ಕರೆಸುತ್ತಲೇ ಇರ್ತೀವಿ. ಈತನೂ (ದರ್ಶನ್) ಹೋಗಿದ್ದ ಅಂತೆ ಎಂದಿದ್ದಾರೆ.
ಇದಾದ ಬಳಿಕ ದರ್ಶನ್ ಪುತ್ರನನ್ನು ಬೇರೊಂದು ಶಾಲೆಗೆ ಸೇರಿಸಲಾಯಿತಂತೆ. ಯಾವುದೋ ದೂರದ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿಸಿದ್ದಾರಂತೆ ಎಂದು ಡಿಕೆಶಿ ಹೇಳಿದ್ದಾರೆ. ಈಗ ಪಾಪ ಆ ಮಗು ಶಾಲೆಗೆ ಸೇರಲು ಏನಾದರೂ ಸಹಾಯ ಮಾಡಬೇಕು ಅಂದರೆ ಪ್ರಿನ್ಸಿಪಾಲ್ ಗೆ ಮಾತಾಡ್ತೀನಿ, ಏನಾದರೂ ಮಾಡೋಣ ಎಂದಿದ್ದಾರೆ.
ಕಳೆದ ವರ್ಷವೇ ದರ್ಶನ್ ಮಗನನ್ನು ಡಿಕೆಶಿ ನಡೆಸಿಕೊಂಡು ಹೋಗುತ್ತಿರುವ ಶಾಲೆ ಬಿಡಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇದೀಗ ಡಿಕೆಶಿ ಮಾತು ಗಮನಿಸಿದರೆ ತಂದೆ ಮಾಡಿದ ಪ್ರಕರಣದಿಂದ ಮಗ ವಿನೀಶ್ ಭವಿಷ್ಯಕ್ಕೂ ಕುತ್ತಾಗಿದೆ ಎನಿಸುತ್ತಿದೆ.