Publish Date: Sat, 20 Jul 2024 (13:45 IST)
Updated Date: Sat, 20 Jul 2024 (13:48 IST)
ಬೆಂಗಳೂರು: ಶಿರೂರಿನಲ್ಲಿ ಇತ್ತೀಚೆಗೆ ನಡೆದ ಭೂಕುಸಿತ ದುರಂತ ಸ್ಥಳಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭೇಟಿ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯ ಭಾರತ್ ಝೋಡೋ ಭವನದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಶಿರೂರಿಗೆ ಕುಮಾರಸ್ವಾಮಿ ಭೇಟಿ ನೀಡಿದ ಬಗ್ಗೆ ಕೇಳಿದಾಗ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಅವರೇನಾದರೂ ಮಿಲಿಟ್ರಿ ಕರ್ಕೊಂಡು ಬಂದು ಏನಾದರೂ ತೆರವು ಮಾಡಿದ್ರೆ ಕಾರ್ಯಾಚರಣೆ ಮಾಡಿದ್ರು ಎನ್ನಬಹುದಿತ್ತು. ಸುಮ್ನೇ ಬಂದು ವಿಸಿಟ್ ಮಾಡಿದ್ರೆ ಏನು ಪ್ರಯೋಜನ. ಘಟನೆ ನಡೆದ ಒಂದೇ ಗಂಟೆಯಲ್ಲಿ ನಮ್ಮ ಇಬ್ಬರು ಸಚಿವರನ್ನು ಅಲ್ಲಿಗೆ ಓಡಿಸಿದ್ದೆವು. ಅವರು ತಕ್ಷಣ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ನಮ್ಮ ಸರ್ಕಾರ ಏನು ಮಾಆಡಬೇಕೋ ಮಾಡಿದ್ದಾರೆ. ಇನ್ನೇನು ಮಿಲಿಟ್ರಿಯವರನ್ನು ಕರೆಸಿ ಏನಾದ್ರೂ ಮಾಡಿದ್ರೆ ಕೇಂದ್ರದಿಂದ ಏನಾದರೂ ಸಹಾಯ ಮಾಡಿದ್ದಾರೆ ಎನ್ನಬಹುದಿತ್ತು. ಯಾರು ಬೇಕಾದರೂ ಹೋಗಲಿ, ನಾನ್ಯಾಕೆ ಸ್ಟಾಪ್ ಮಾಡ್ಲಿ? ಅವರ ಪಾರ್ಟಿ ಸಂಘಟನೆಗೆ ಅವರು ಹೋಗ್ತಾರಪ್ಪ, ಹೋಗಲಿ ಎಂದಿದ್ದಾರೆ.
ಇನ್ನು ಎಲ್ಲಾ ನಿಗಮದಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲಾ ನಿಗಮದ ಅಧ್ಯಕ್ಷರಿಗೂ ಎಚ್ಚರಿಕೆ ನೀಡಿದ್ದೇವೆ. ಕೆಲವು ಅಧಿಕಾರಿಗಳು ಖದೀಮರಿದ್ದಾರೆ. ಕೆಲವರು ಅಲ್ಲಿ ತಿಂದು ಇಲ್ಲೂ ಇರ್ತಾರೆ. ಕ್ಲರ್ಕ್ ಗಳಿಗೆ ಎಂಡಿ, ಸೂಪರ್ ವೈಸರ್ ಅಂತ ಪೋಸ್ಟ್ ಕೊಟ್ಟಿದ್ದಾರೆ. ಅದನ್ನೆಲ್ಲಾ ನಾವು ಸರಿಮಾಡ್ತೀವಿ ಎಂದಿದ್ದಾರೆ.