Publish Date: Fri, 02 Feb 2024 (10:27 IST)
Updated Date: Fri, 02 Feb 2024 (10:30 IST)
ಬೆಂಗಳೂರು: ಬಜೆಟ್ ಬಗ್ಗೆ ಟೀಕಿಸುವ ಭರದಲ್ಲಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಹೇಳಿಕೆ ನೀಡಿದ್ದ ಸಂಸದ ಡಿಕೆ ಶಿವಕುಮಾರ್ ಹೇಳಿಕೆಯಿಂದ ಪಕ್ಷಕ್ಕೆ ಭಾರೀ ಮುಜುಗರವಾಗಿದೆ.
ಆದರೆ ತಮ್ಮ ವಿವಾದಾತ್ಮಕ ಹೇಳಿಕೆ ನೀಡಿದರೂ ಅಣ್ಣ ಡಿಕೆ ಶಿವಕುಮಾರ್ ಪಕ್ಷಕ್ಕೂ ತೊಂದರೆಯಾಗದಂತೆ, ತಮ್ಮನನ್ನೂ ಬಿಟ್ಟುಕೊಡದಂತೇ ಸಮತೋಲನದ ಹೇಳಿಕೆ ನೀಡಿದ್ದಾರೆ. ಡಿಕೆ ಸುರಶ್ ಹೇಳಿಕೆಯನ್ನು ವಿಪಕ್ಷಗಳು ಟೀಕಾಸ್ತ್ರವಾಗಿ ಬಳಸಿಕೊಂಡಿದ್ದು, ಕಾಂಗ್ರೆಸ್ ನ ಪ್ರತ್ಯೇಕತೆ ಮನಸ್ಥಿತಿಯನ್ನು ಈ ಹೇಳಿಕೆ ಸೂಚಿಸುತ್ತಿದೆ ಎಂದಿವೆ. ಸುರೇಶ್ ಹೇಳಿಕೆ ಪಕ್ಷಕ್ಕೆ ಮುಜುಗರವುಂಟು ಮಾಡಿದೆ.
ಡಿಕೆ ಸುರೇಶ್ ಹೇಳಿದ್ದೇನು?
ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಡಿಕೆ ಶಿವಕುಮಾರ್, ಈ ಬಜೆಟ್ ನಲ್ಲಿ ಏನೂ ಇಲ್ಲ. ದಕ್ಷಿಣ ಭಾರತದವರಿಗೆ ಅನ್ಯಾಯ ಆಗಿದೆ. ಇಲ್ಲಿನ ಹಣವನ್ನು ಉತ್ತರ ಭಾರತದವರಿಗೆ ಹಂಚಲಾಗುತ್ತಿದೆ. ಹೀಗೇ ಆದರೆ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆಯಿಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಅವರ ಈ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿದೆ. ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಟೀಕಾ ಪ್ರಹಾರ ನಡೆಸಿವೆ.
ಒಂದೆಡೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರಾ ಮಾಡುತ್ತಾರೆ. ಬಿಜೆಪಿಯೇ ರಾಷ್ಟ್ರವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇನ್ನೊಂದೆಡೆ ಅದೇ ಕಾಂಗ್ರೆಸ್ ಪಕ್ಷದ ಸಂಸದರು ಪ್ರತ್ಯೇಕ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ಟೀಕಿಸಿದೆ.
ಡಿಕೆ ಶಿವಕುಮಾರ್ ಹೇಳಿಕೆ
ತಮ್ಮ ಡಿಕೆ ಸುರೇಶ್ ಇಂತಹದ್ದೊಂದು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಸುರೇಶ್ ಜನರ ಅಭಿಪ್ರಾಯ ಹೇಳಿದ್ದಾರಷ್ಟೇ. ಕೇಂದ್ರ ಬಜೆಟ್ ನಲ್ಲಿ ದಕ್ಷಿಣ ಭಾರತಕ್ಕೆ ಏನೂ ಕೊಡುಗೆ ಸಿಗುತ್ತಿಲ್ಲ. ಡಿಕೆ ಸುರೇಶ್ ದಕ್ಷಿಣ ಭಾರತದ ಜನರ ನೋವನ್ನು ಹೇಳಿಕೊಂಡಿದ್ದಾರಷ್ಟೇ. ಇಡೀ ದೇಶವೇ ಒಂದು. ಎರಡೂ ಭಾಗಗಳ ನಡುವೆ ಸಮತೋಲನವಿರಬೇಕು. ಕೇವಲ ಹಿಂದಿ ಭಾಷಿಕರ ಬಗ್ಗೆ ಮಾತ್ರ ಗಮನಹರಿಸಿದರೆ ಸಾಲದು. ಎಲ್ಲರಿಗೂ ಸಮನಾದ ಪಾಲಿರಬೇಕು ಎಂದಿದ್ದಾರೆ.