Publish Date: Thu, 01 Feb 2024 (17:09 IST)
Updated Date: Thu, 01 Feb 2024 (17:11 IST)
ನವದೆಹಲಿ: ಕೇಂದ್ರ ಬಜೆಟ್ ಘೋಷಣೆ ಬಳಿಕ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ನೀಡಿದ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಮಂಡಿಸಿದರು. ಇದೊಂದು ಮಧ್ಯಂತರ ಬಜೆಟ್ ಆಗಿತ್ತು. ಕೇವಲ ಒಂದು ಗಂಟೆಯಲ್ಲಿ ನಿರ್ಮಲಾ ಸೀತರಾಮಾನ್ ಬಜೆಟ್ ಭಾಷಣ ಮುಗಿಸಿದ್ದರು. ಈ ಬಜೆಟ್ ನಲ್ಲಿ ಕೇಂದ್ರ ಚುನಾವಣೆ ದೃಷ್ಟಿಯಿಂದ ಜನರನ್ನು ಓಲೈಸಲು ಹೊಸ ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ಹೊಸ ಘೋಷಣೆ ಮಾಡದೇ ಅಚ್ಚರಿ ನೀಡಿದೆ.
ಡಿಕೆ ಸುರೇಶ್ ಸ್ಪೋಟಕ ಹೇಳಿಕೆ
ಬಜೆಟ್ ಭಾಷಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕದ ಸಂಸದ ಡಿಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಇಂದಿನ ಬಜೆಟ್ ನಲ್ಲಿ ಹೊಸತೇನೂ ಇರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಹೀಗೇ ಆದರೂ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದಿದ್ದಾರೆ.
ದಕ್ಷಿಣ ಭಾರತದ ಹಣವನನ್ನು ಉತ್ತರ ಭಾರತವರಿಗೆ ಹಂಚಲಾಗುತ್ತಿದೆ. ಇಲ್ಲಿನ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ. ಹೀಗಾದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದಿದ್ದಾರೆ.
ಅವರ ಈ ಹೇಳಿಕೆ ವೈರಲ್ ಆಗಿದ್ದು, ಬಿಜೆಪಿಗೆ ಟೀಕೆ ಮಾಡಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಈ ಮೊದಲು ಬಿಜೆಪಿ ದೇಶವನ್ನು ದಕ್ಷಿಣ ಮತ್ತು ಉತ್ತರ ಎಂದು ಎರಡು ಭಾಗ ಮಾಡಿದೆ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರೇ ಈಗ ಪ್ರತ್ಯೇಕ ರಾಷ್ಟ್ರದ ಮಾತನಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.