Publish Date: Thu, 16 Oct 2025 (09:35 IST)
Updated Date: Thu, 16 Oct 2025 (09:44 IST)
ಬೆಂಗಳೂರು: ಈ ಹಿಂದೆ ನನಗೆ ಬಿಜೆಪಿಯಿಂದ ಡಿಸಿಎಂ ಹುದ್ದೆಯ ಆಫರ್ ಬಂದಿತ್ತು. ಆದರೆ ನಾನು ಜೈಲು ಆಯ್ಕೆ ಮಾಡಿಕೊಂಡೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ತಮ್ಮ ಕುರಿತ ಎ ಸಿಂಬಲ್ ಆಫ್ ಲಾಯಲ್ಟಿ ಡಿಕೆ ಶಿವಕುಮಾರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ನಾನು ಈ ಹಿಂದೆ ಜೈಲಿಗೆ ಹೋಗುವ ಸಂದರ್ಭ ಬಂದಾಗ ಬಿಜೆಪಿ ಹೈಕಮಾಂಡ್ ನನಗೆ ಡಿಸಿಎಂ ಆಗ್ತೀರೋ ಜೈಲಿಗೆ ಹೋಗ್ತೀರೋ ಎಂದು ಪ್ರಶ್ನೆ ಮಾಡಿತ್ತು. ನಾನು ನನ್ನ ಪಕ್ಷಕ್ಕೆ ನಿಷ್ಠ. ಹೀಗಾಗಿ ಜೈಲನ್ನೇ ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ.
ನಾನು ಬೆಳೆಯಲು ನನ್ನ ಕಾರ್ಯಕರ್ತರು ಕಾರಣ. ನನ್ನ ಪಕ್ಷವನ್ನು ಅಪಾರ ಗೌರವಿಸುತ್ತೇನೆ. ನನ್ನ ಪಕ್ಷಕ್ಕೆ ಯಾವತ್ತೂ ನಿಷ್ಠನಾಗಿಯೇ ಇರುತ್ತೇನೆ. ಇನ್ನೊಂದು 8-10 ವರ್ಷ ರಾಜಕೀಯದಲ್ಲಿರುತ್ತೇನೆ. ನಂತರ ಯುವಕರಿಗೆ ದಾರಿ ಮಾಡಿಕೊಡುತ್ತೇನೆ ಎಂದಿದ್ದಾರೆ.
ಇಷ್ಟು ವರ್ಷದ ರಾಜಕೀಯ ಜೀವನದ ನನಗೆ ತೃಪ್ತಿ ತಂದಿದೆ. ರಾಜಕೀಯದಲ್ಲಿ ತಮ್ಮ ನಂತರ ಮುಂದಿನ ನಾಯಕರನ್ನು ಬೆಳೆಸುತ್ತಾ ಹೋಗುವುದೇ ನಿಜವಾದ ನಾಯಕನ ಲಕ್ಷಣ ಎಂದು ಈ ಹಿಂದೆ ಒಮ್ಮೆ ರಾಜೀವ್ ಗಾಂಧಿಯವರು ನನಗೆ ಹೇಳಿದ್ದರು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ನನ್ನ ಕುರಿತ ಈ ಪುಸ್ತಕ ಹಲವು ಜನರಿಗೆ ಪ್ರೇರಣೆಯಾಗಲಿ ಎಂಬುದೇ ನನ್ನ ಆಶಯ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.