Publish Date: Sat, 24 Nov 2018 (09:20 IST)
Updated Date: Sat, 24 Nov 2018 (09:23 IST)
ಬೆಂಗಳೂರು: ಕಬ್ಬು ಬೆಳೆಗಾರರ ಜತೆ ಸಂಧಾನ ನಡೆಸಲು ಬೆಳಗಾವಿಗೆ ಬಂದು ಸಂಧಾನ ನಡೆಸಿದ ಸಚಿವ ಡಿಕೆ ಶಿವಕುಮಾರ್ ಮೇಲೆ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ.
ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಜಾರಕಿಹೊಳಿ ಸಹೋದರರು ಡಿಕೆಶಿ ಮೇಲಿನ ಮುನಿಸಿಗೆ ಸರ್ಕಾರದ ವಿರುದ್ಧವೇ ಬಂಡಾಯವೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಅದಾದ ಬಳಿಕ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು.
ಆದರೆ ಇದೀಗ ನಿನ್ನೆ ಸಚಿವ ಡಿಕೆ ಶಿವಕುಮಾರ್ ರೈತರ ಜತೆಗೆ ಸಂಧಾನ ಸಭೆ ನಡೆಸಿದ್ದು ಮತ್ತೆ ಜಾರಕಿಹೊಳಿ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ ತಮ್ಮ ಸಂಪರ್ಕದಲ್ಲಿರುವ ಶಾಸಕರ ಬೆಂಬಲದೊಂದಿಗೆ ಸಚಿವ ಜಾರಕಿಹೊಳಿ ಗುಪ್ತ ಸಭೆ ನಡೆಸಿ ಬೆಳಗಾವಿ ಅಧಿವೇಶನಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಆದರೆ ಇನ್ನೊಂದೆಡೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಡಿಕೆಶಿ ನಡೆಸಿರುವ ಸಂಧಾನ ಸಭೆಯನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ, ರಮೇಶ್ ಜಾರಕಿಹೊಳಿ ಮಾಡಬೇಕಾದ ಕೆಲಸವನ್ನು ಡಿಕೆಶಿ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ. ಈ ವಿಚಾರಗಳ ಜತೆಗೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯೂ ಸದ್ಯದಲ್ಲೇ ನಡೆಯುವುದರಿಂದ ಮತ್ತೊಂದು ಬಂಡಾಯಕ್ಕೆ ಈ ವಿದ್ಯಮಾನ ಕಾರಣವಾಗುತ್ತಾ ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.