Publish Date: Sat, 04 May 2024 (10:00 IST)
Updated Date: Sat, 04 May 2024 (10:14 IST)
ಬೆಂಗಳೂರು: ದಾಖಲೆಯ ತಾಪಮಾನ ಕಂಡಿದ್ದ ರಾಜ್ಯ ರಾಜಧಾನಿ ಬೆಂಗಳೂರಿಗೆ ಕಳೆದ ಎರಡು ದಿನಗಳಿಂದ ಮಳೆಯಾಗಿದ್ದು, ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಇದೀಗ ಮಳೆಯ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಡಿರುವ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.
ನಿನ್ನೆ ಮಧ್ಯಾಹ್ನದಿಂದ ಮೆಜೆಸ್ಟಿಕ್, ರಾಜಾಜಿನಗರ, ವಿಧಾನಸೌಧ, ಕೆಆರ್ ಪುರಂ, ಜಯನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಮಳೆಯಿಂದಾಗಿ ಮಂಜು ಮುಸುಕಿದಂತಹ ವಾತಾವರಣವಿತ್ತು. ಈ ವಿಡಿಯೋಗಳನ್ನು ಡಿಕೆಶಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ಇದರ ಜೊತೆಗೆ ಸಾಲೊಂದನ್ನು ಬರೆದಿದ್ದಾರೆ. 'ಏರ್ಕಂಡೀಶನ್ ಸಿಟಿಯ ವೈಭವ ಮತ್ತೆ ಮರುಕಳಿಸಿದೆ. ತಿಂಗಳಾನುಗಟ್ಟಲೆ ಬಿಸಿಲ ಧಗೆಯ ನಂತರ ವರುಣನು ಬೆಂಗಳೂರಿನ ಮೇಲೆ ಕೃಪೆ ತೋರಿದ್ದಾನೆ. ಬಿಸಿಲ ಝಳದಿಂದ ಕೊನೆಗೂ ಮುಕ್ತಿ ಸಿಗುತ್ತಿದೆ. ದ್ವೇಷ- ಕೋಮು ದಳ್ಳುರಿಯ ಧಗೆಯಿಂದ ಮುಕ್ತಿ ಸಿಗಲು ಇನ್ನೊಂದು ತಿಂಗಳಷ್ಟೇ ಬಾಕಿ ಇದೆ' ಎಂದಿದ್ದಾರೆ. ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದಕ್ಕೆ ಹಲವು ಇಂಟ್ರೆಸ್ಟಿಂಗ್ ಕಾಮೆಂಟ್ ಗಳು ಬಂದಿವೆ. ಇದು ಹಳೆಯ ವಿಡಿಯೋ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹೊಸ ಸರ್ಕಾರ ಬರುತ್ತದೆ ಎಂದರೆ ಜೂನ್ ನಂತರ ನಿಮ್ಮ ಸರ್ಕಾರ ಪತನವಾಗುತ್ತದಾ ಸಾರ್ ಎಂದು ಕಾಲೆಳೆದಿದ್ದಾರೆ.