Publish Date: Mon, 23 Feb 2026 (18:44 IST)
Updated Date: Mon, 23 Feb 2026 (18:47 IST)
ರಾಮನಗರ: ತಮ್ಮ ಕರ್ತವ್ಯವನ್ನೂ ಸರಿಯಾಗಿ ನಿಭಾಯಿಸದ ಸಚಿವರ ಮೇಲೆ ನನಗೆ ಅಸಮಾಧಾನವಿರುವುದು ನಿಜ. ಆದರೆ ಅವರ ಹೆಸರನ್ನೂ ಹೇಳಲು ನಾನು ತಯಾರಿಲ್ಲ. ನಾನು ಶಾಸಕನಾಗಿದ್ದು, ಸಚಿವರಿಗಿಂತ ಉತ್ತಮವಾದ ಕೆಲಸ ಮಾಡಿದ್ದೇನೆಂದು ಡಿಸಿಎಂ ಆಪ್ತ ಶಾಸಕ ಎಚ್ಎ ಇಕ್ಬಾಲ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಚಿವರು ಶಾಸಕರ ಭೇಟಿಗೂ ಸಿಗುತ್ತಿಲ್ಲ. ಕೆಲಸ–ಕಾರ್ಯಗಳಿಗೂ ಸ್ಪಂದಿಸುತ್ತಿಲ್ಲ. ಸಚಿವರ ಈ ನಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಕ್ಕೆ ತಂದಿದ್ದೇನೆಂದು ಹೇಳಿದರು.
ನಾವ್ಯಾರು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ. ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ ಒಳ್ಳೆಯ ಆಡಳಿತ ಆಗಬೇಕಿದೆ. ಅದಕ್ಕಾಗಿ, ಕೆಲವರನ್ನು ಬದಲಾಯಿಸಿ ಎಂದು ಎರಡ್ಮೂರು ಸಭೆಯಲ್ಲಿ ಒತ್ತಾಯಿಸಿದ್ದೇವೆ. ಆರು ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಲೇ ಇದೆ ಎಂದರು.
ದಲಿತ ಸಿಎಂ ಕೂಗು ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ , ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ಬಹಳ ದುಡಿದಿದ್ದಾರೆ. ಅವರಿಗೊಂದು ಸಿಎಂ ಆಗುವ ಅವಕಾಶ ಮಾಡಿಕೊಡಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿದೆ ಎಂದರು.
ಇನ್ನೂ ಡಿಕೆ ಶಿವಕುಮಾರ್ಗೆ ನನ್ನ ಮೇಲೆ ಹಾಗೂ ನನಗೆ ಅವರ ಮೇಲೆ ಪ್ರೀತಿ ಸ್ವಲ್ಪ ಜಾಸ್ತಿ. ಅವರು ಏನೇ ಹೇಳಿದರೂ ತಲೆ ಮೇಲಿಟ್ಟುಕೊಂಡು ಸ್ವೀಕರಿಸುತ್ತೇನೆ. ಅವರು ಸಿ.ಎಂ ಆಗಬೇಕೆಂಬ ಹೇಳಿಕೆಗೆ ನನ್ನ ಕೊನೆ ಉಸಿರಿರುವವರೆಗೆ ಬದ್ಧ ಎಂದು ಇಕ್ಬಾಲ್ ಹುಸೇನ್ ಬಾಯಿ ಮುಚ್ಚಿಕೊಂಡಿರಬೇಕು ಎಂಬ ಡಿಸಿಎಂ ಎಚ್ಚರಿಕೆ ಮಾತಿಗೆ ಪ್ರತಿಕ್ರಿಯೆ ನೀಡಿದರು.