ಬೆಂಗಳೂರು: ರಾಜ್ಯ ಪೊಲೀಸ್ ಸಿಬ್ಬಂದಿಗಳು ಧರಿಸುತ್ತಿದ್ದ ಹಳೆ ಕಾಲದ ಟೋಪಿಗೆ ಗುಡ್ ಬೈ ಹೇಳಿ ಈಗ ಹೊಸ ಮಾದರಿಯ ನೀಲಿ ಟೋಪಿಗಳನ್ನು ನೀಡಲಾಗಿದೆ. ಇಂದು ಟೋಪಿ ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಎಂ ಡಿಕೆ ಶಿವಕುಮಾರ್ ಹೊಸ ಟೋಪಿಯ ಲಾಭವನ್ನೂ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಯ ಪೀಕ್ ಕ್ಯಾಪ್ ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹಸಚಿವರಾದ ಜಿ.ಪರಮೇಶ್ವರ್ ಭಾಗಿಯಾಗಿದ್ದರು.
ಈ ವೇಳೆ ಔಪಚಾರಿಕವಾಗಿ ಓರ್ವ ಪೊಲೀಸ್ ಸಿಬ್ಬಂದಿಗೆ ಡಿಕೆಶಿ ಟೋಪಿ ಹಾಕಿದ್ದಾರೆ. ಬಳಿಕ ಇದರ ಲಾಭದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಪ್ರತಿಭಟನೆ, ಆರೋಪಿಯನ್ನು ಹಿಡಿಯಲು ಓಡುವಾಗ, ಲಾಠಿಪ್ರಹಾರದ ವೇಳೆ ಸ್ಲೋಚ್ ಕ್ಯಾಪ್ ಕೆಳಗೆ ಬೀಳುತ್ತಿತ್ತು. ಪೊಲೀಸರ ಹ್ಯಾಟ್ ಕೆಳಗೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಕಳೆದ 4 ದಶಕಗಳಿಂದ ಪೀಕ್ ಕ್ಯಾಪ್ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು. ಕೊನೆಗೆ ನಮ್ಮ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್ ಕ್ಯಾಪ್ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್ ಕ್ಯಾಪ್ನಲ್ಲಿ ಎಲಾಸ್ಟಿಕ್ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್ ನೀಡುತ್ತಿದ್ದೇವೆ ಎಂದಿದ್ದಾರೆ.