Publish Date: Sat, 18 Apr 2026 (18:57 IST)
Updated Date: Sat, 18 Apr 2026 (18:59 IST)
ಬೆಂಗಳೂರು: ಮಹಿಳಾ ಮೀಸಲು ಮಸೂದೆ ಸುಮಾರು ಏಳು ದಶಕಗಳ ಹೋರಾಟದ ನಂತರ ಜಾರಿಯಾಗುವುದರಲ್ಲಿತ್ತು. ಆದರೆ ಅದಕ್ಕೆ ಬೆಂಬಲ ನೀಡದೆ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳಿಂದ ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮಾಡಿದ ಅವಮಾನವನ್ನು ಭಾರತದ ಮಹಿಳೆಯರು ಎಂದೂ ಕ್ಷಮಿಸುವುದಿಲ್ಲ. ಮೀಸಲನ್ನು ಸಾಂವಿಧಾನಿಕ ಹಕ್ಕಾಗಿ ಪಡೆಯಲು ನಾವೆಲ್ಲ ಸಿದ್ಧರಾಗಿದ್ದೆವು. ಮಸೂದೆಗೆ ದೇಶದ ಮಹಿಳೆಯರ ವಿರೋಧ ಹೇಗೆ ಇರುತ್ತದೆ ಎಂಬುದನ್ನು ಮಂದಿನ ದಿನದಲ್ಲಿ ಕಾಂಗ್ರೆಸ್ ನೋಡಲಿ ಎಂದರು.
ಮಹಿಳಾ ಮೀಸಲು ಮಸೂದೆ ಜಾರಿಯ ಯಶಸ್ಸು ಮತ್ತು ಶ್ರೇಯಸ್ಸು ಎಲ್ಲರಿಗೂ ಸಿಗಲಿ. ಆದರೆ ಅಂಗೀಕಾರ ಆಗಲು ಬೆಂಬಲ ನೀಡಿ ಎಂದು ಪ್ರಧಾನಿ ಹೇಳಿದ್ದರು. ಆದರೆ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಮಸೂದೆಗೆ ತಡೆ ನೀಡಿದವು ಎಂದು ಆರೋಪಿಸಿದರು.
ಸಂಸತ್ತಿನಲ್ಲಿ ತಮ್ಮ ತಮ್ಮ ಪಕ್ಷಗಳನ್ನು ಪ್ರೈವೇಟ್ ಲಿಮಿಟೆಡ್ ಕಂಪನಿಗಳ ರೀತಿ ಮಾಡಿಕೊಂಡಿವೆ. ಸಮಾಜವಾದಿ, ಡಿಎಂಕೆ, ಕಾಂಗ್ರೆಸ್ ಹೀಗೆ ಎಲ್ಲ ಪಕ್ಷಗಳಲ್ಲಿ ತಮ್ಮ ಮನೆಯ ಮಹಿಳೆಯರು ಸಂಸತ್ತಿನಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ಆದರೆ ಬೇರೆ ಮಹಿಳೆಯರಿಗೆ ಅಡ್ಡಿ ಮಾಡುತ್ತ್ತಾರೆ. ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಇಂದಿರಾ ಗಾಂಧಿ ಹೀಗೆ ಅವರದೇ ಕುಟುಂಬವರು ಸಂಸತ್ತಿನಲ್ಲಿ ಇದ್ದರು. ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದವರೂ ಸಂಸತ್ತಿನಲ್ಲಿ ಇದ್ದಾರೆ. ಡಿಎಂಕೆಯಲ್ಲೂ ಹಾಗೇ ಇದೆ. ಆದರೆ ಭಾರತದ ಸಾಮಾನ್ಯ ಹೆಣ್ಣು ಮಗಳು ಸಂಸತ್ತಿಗೆ, ವಿಧಾನಸಭೆಗೆ ಬರುವುದಾದರೆ ಅದನ್ನು ವಿರೋಧಿಸುವ ಮನಸ್ಥಿತಿ ಇವರದು. ಕಾಂಗ್ರೆಸ್ನಲ್ಲಿ ಮಂತ್ರಿ ಮಗಳು, ಮಾಜಿ ಮಂತ್ರಿ ಮಗಳಿಗೆ ಮಾತ್ರವೇ ಟಿಕೆಟ್ ನೀಡುತ್ತಾರೆ ಎಂದರು.
ಮಹಿಳಾ ಮೀಸಲು ಜಾರಿಯ ಬೆಳಕನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೋರಿಸಿದರು. ಆದರೆ ಇವರೆಲ್ಲ ಅದನ್ನು ಆರಿಸಿದರು ಎಂದು ಆಕ್ಷೇಪಿಸಿದರು.