Publish Date: Fri, 03 Sep 2021 (11:24 IST)
Updated Date: Fri, 03 Sep 2021 (11:27 IST)
ಬೆಂಗಳೂರು : ಪ್ರಾದೇಶಿಕ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಗುಡುಗಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನನಗೆ ಕಾಲು ನೋವಿದೆ. ಆದರೆ ಅದಕ್ಕೆ ಹೆದರಲ್ಲ. ಪ್ರತಿ ಜಿಲ್ಲೆಗೂ ಹೋಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ನಗರ ಘಟಕದಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ದೇವೇಗೌಡರು ಭಾಷಣ ಮಾಡುವಾಗ ಜೋರು ಮಳೆ ಬರುತ್ತಿತ್ತು. ಮಳೆಯನ್ನೂ ಲೆಕ್ಕಿಸದೆ ಭಾಷಣ ಮುಂದುವರಿಸಿದ ದೇವೇಗೌಡರು, ಏನೂ ಆಗಲ್ಲ. ಎಲ್ಲೂ ಹೋಗಬೇಡಿ. ನಾನೇ ಧೈರ್ಯವಾಗಿ ನಿಂತಿದ್ದೇನೆ. ತಲೆಯಲ್ಲಿ ಕೂದಲಿಲ್ಲ, ಆದರೂ ನೆನೆಯುತ್ತ ಇದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.