Publish Date: Wed, 08 May 2024 (19:40 IST)
Updated Date: Wed, 08 May 2024 (19:51 IST)
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸಲು ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ನನ್ನ ದುಂಬಾಲು ಬಿದ್ದೀದ್ದನು. ಆದರೂ ಕೂಡ ನನ್ನ ಹೆಸರು ಹೇಳಿದ್ದು ವಿಷಾದ ಎಂದು ಮಾಜಿ ಸಂಸದ ಶಿವರಾಮೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ದೇಶದಲ್ಲಿ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣ ದೇಶದಲ್ಲೇ ಚರ್ಚೆಗೆ ಕಾರಣವಾಗಿದ್ದು, ಪೆನ್ಡ್ರೈವ್ ಬಿಡುಗಡೆ ಹಿಂದೆ ಮಾಜಿ ಸಂಸದ ಶಿವರಾಮೇಗೌಡರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್ಡ್ರೈವ್ ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ.
ನಾನು ಕಚೇರಿಯಲ್ಲಿದ್ದಾಗ ಹೊಳೆನರಸಿಪುರದ ಕೆಲವರು ಬಂದಿದ್ದರು. ದೇವರಾಜೇಗೌಡ ನಿಮ್ಮನ್ನು ಭೇಟಿ ಮಾಡಬೇಕು ಅಂತ ನನಗೆ ಹೇಳಿದರು. ಬಳಿಕ ದೇವರಾಜೇಗೌಡಗೆ ಫೋನ್ ಮಾಡಿಕೊಟ್ಟರು. ಆಗ ನಾನು 'ಏನಪ್ಪ ಚೆನ್ನಾಗಿದ್ದೀಯಾ, ನಿನ್ನ ಆಸೆ ಈಡೇರಿತು. ವರ್ಷಾನುಗಟ್ಟಲೇ ಹೋರಾಟ ಮಾಡುತ್ತಿದ್ದೆ. ಎಲ್ಲವೂ ಆಚೆಗೆ ಬಂತು' ಅಂತ ಫೋನ್ನಲ್ಲಿ ಇಷ್ಟೇ ಮಾತನಾಡಿದ್ದೇನೆ ಎಂದು ಶಿವರಾಮೇಗೌಡ ಹೇಳಿದರು.