Publish Date: Sat, 18 May 2024 (18:23 IST)
Updated Date: Sat, 18 May 2024 (18:31 IST)
ರಾಮನಗರ: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಸಂಬಂಧಿಸಿದಂತೆ ಬಿಜೆಪಿ ನಾಯಕ ದೇವರಾಜೇಗೌಡ ಅವರು ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯ ಕಾರ್ಯಕರ್ತರಾಗಿರುವ ದೇವರಾಜೇಗೌಡ ಅವರು ಬಿಜೆಪಿ ಜೆಡಿಎಸ್ ಮೈತ್ರಿಗೂ ಮುಂಚೆ ಜೆಡಿಎಸ್ ನಾಯಕರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಲೋಕಸಭೆ ಚುನಾವಣೆ ಮೈತ್ರಿ ನಂತರ ಪ್ರಜ್ವಲ್ ಪ್ರಕರಣ ಹೊರಬರುತ್ತಿದ್ದಂತೆ, ಯೂಟರ್ನ್ ತೆಗೆದುಕೊಂಡು ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಇನ್ನೂ ಕಾಂಗ್ರೆಸ್ ಸಚಿವರ ವಿರುದ್ಧ ದೇವರಾಜೇಗೌಡರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದರು.
ಹೊಳೆನರಸೀಪುರ ಮತ್ತು ಹಾಸನದಲ್ಲಿ ಸುತ್ತುತ್ತಿದ್ದ ಪ್ರಜ್ವಲ್ ರೇವಣ್ಣ, ಎಚ್.ಡಿ. ರೇವಣ್ಣ ಹಾಗೂ ದೇವರಾಜೇಗೌಡ ನಡುವಣ ವೈಯಕ್ತಿಕ ವಿಚಾರವನ್ನು ರಾಜ್ಯಮಟ್ಟಕ್ಕೆ ಸ್ವತಃ ದೇವರಾಜೇಗೌಡ ಎಳೆದು ತಂದಿದ್ದಾರೆ. ಪ್ರಜ್ವಲ್ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಪೆನ್ಡ್ರೈವ್ ಅನ್ನು ದೇವರಾಜೇಗೌಡ ಒಂದು ವರ್ಷದಿಂದ ತಮ್ಮ ಬಳಿ ಇಟ್ಟುಕೊಂಡು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.