Publish Date: Thu, 22 Nov 2018 (15:27 IST)
Updated Date: Thu, 22 Nov 2018 (15:30 IST)
ಆ ತಾಲೂಕು ಕೇಂದ್ರದಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ಸ್ಥಾಪನೆ ಮಾಡಬೇಕು. ಹೀಗಂತ ಆರು ವರ್ಷಗಳಿಂದ ಒತ್ತಾಯಿಸುತ್ತಾ ಬರಲಾಗುತ್ತಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಎ.ಸಿ ಕಚೇರಿ ಸ್ಥಾಪನೆಗೆ ಆಗ್ರಹ ಮಾಡುವಂತೆ ಬಲವಾದ ಧ್ವನಿ ಕೇಳಿಬರುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಹೇಳಿಕೆ ನೀಡಿದ್ದು,
ಎ.ಸಿ ಕಚೇರಿ ಸ್ಥಾಪನೆಗೆ ಕಳೆದ 6 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಹಲವು ಬಾರಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ಪ್ರತಿಭಟನಾಕಾರರನ್ನು ಮನವೊಲಿಸಿದ್ದರು.
ಸಿ.ಎಂ. ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಜನವರಿ 1 ರ ಒಳಗಾಗಿ ಎ.ಸಿ ಕಚೇರಿ ನಿರ್ಮಾಣವಾಗಬೇಕು. ರೈತರ ಎಲ್ಲಾ ಕೆಲಸಗಳು ಎ.ಸಿ ವ್ಯಾಪ್ತಿಗೆ ಬರುವುದರಿಂದ ಬಾಗೇವಾಡಿಯಲ್ಲಿ ಎ.ಸಿ ಕಚೇರಿ ನಿರ್ಮಾಣವಾಗಬೇಕು. ಸಣ್ಣ ಪುಟ್ಟ ಕೆಲಸಗಳಿಗೆ ದೂರದ ವಿಜಯಪುರಕ್ಕೆ ಪ್ರಯಾಣಿಸಬೇಕಾದ ಸಂಕಷ್ಟ ಎದುರಾಗಿದೆ. ಎಸಿ ಕಚೇರಿ ನಿರ್ಮಾಣವಾಗದಿದ್ದರೆ ಜಿಲ್ಲಾ ರೈತ ಸಂಘ ಹಾಗೂ ತಾಲೂಕು ಮಠಾಧೀಶರ ಸಮಕ್ಷಮದಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದರು.